ಮುಂಬೈ, ನ 26 (DaijiworldNews/DB): ಮುಂಬೈ ನಗರದಲ್ಲಿ 2008 ನವೆಂಬರ್ 26ರಂದು ನಡೆದ ಉಗ್ರರ ದಾಳಿಯ ಕರಾಳತೆಗೆ ಇಂದಿಗೆ 14 ವರ್ಷವಾಗಿದ್ದು, ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ಗೇಟ್ ವೇ ಆಫ್ ಇಂಡಿಯಾ ಮತ್ತು ತಾಜ್ ಹೋಟೆಲ್ ಮುಂಭಾಗದಲ್ಲಿ ನಡೆಯಿತು. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ನೆರೆದ ಜನರು ಗೌರವ ಸಲ್ಲಿಸಿದರು.
2008 ನವೆಂಬರ್ 26ರಂದು ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ 10 ಮಂದಿ ಭಯೋತ್ಪಾದಕರು ಮುಂಬೈನ ತಾಜ್ ಹೊಟೇಲ್, ಒಬೇರಾಯ್ ಹೊಟೇಲ್, ಲಿಯೋಪೋಲ್ಡ್ ಕೆಫೆ, ನಾರಿಮನ್ ಹೌಸ್, ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್ ಮೇಲೆ ನಡೆಸಿದ ದಾಳಿಯಲ್ಲಿ ಸೈನಿಕರು, ಪೊಲೀಸರು, ವಿದೇಶೀ ಪ್ರಜೆಗಳು ಸೇರಿದಂತೆ 166 ಮಂದಿ ಮೃತಪಟ್ಟು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಸತತ ಮೂರು ದಿನ ನಡೆದ ದಾಳಿಯಲ್ಲಿ ಉಗ್ರರು ಮಾರಣಹೋಮವನ್ನೇ ನಡೆಸಿದ್ದರು. ಭಾರತದ ಇತಿಹಾಸದ ಕರಾಳ ಅಧ್ಯಾಯವಾಗಿ ಆ ಘಟನೆ ಉಳಿದಿದೆ. ಇಂದಿಗೆ ಘಟನೆ ನಡೆದು 14 ವರ್ಷವಾಗಿದೆ.
ಉಗ್ರರ ದಾಳಿಯಿಂದ ಜನರ ರಕ್ಷಣೆಗೆ ಮುಂದಾದ ನಮ್ಮ ಪೋಲಿಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಕಾಮ್ಟೆ ಮತ್ತು ತುಕಾರಾಮ್ ಓಂಬ್ಳೆ ಹಾಗೂ ಯೋಧ ಸಂದೀಪ್ ಉನ್ನಿಕೃಷ್ಣನ್ ೀ ಘಟನೆಯಲ್ಲಿ ಹುತಾತ್ಮರಾದರು.
ಇನ್ನು ಉಗ್ರರ ಗುಂಡಿನಿಂದ ತನ್ನ ಎದೆ ಸೀಳಿದರೂ ಎದೆಗುಂದದ ಪೊಲೀಸ್ ಅಧಿಕಾರಿ ತುಕಾರಾಮ್ ಕೊನೆಯುಸಿರೆಳೆಯುವ ಮುನ್ನ ಉಗ್ರ ಕಸಬ್ನ ಮೇಲೆ ಗುಂಡು ಹಾರಿಸಿ ಆತನನ್ನು ಸೆರೆ ಹಿಡಿಯುವಂತೆ ಮಾಡಿದ್ದರು. ಅವರ ಈ ಅಪ್ರತಿಮ ಶೌರ್ಯಕ್ಕೆ ಭಾರತ ಸರ್ಕಾರವು 2009ರಲ್ಲಿ ಅಶೋಕ ಚಕ್ರದ ಗೌರವ ನೀಡಿದೆ. ಇನ್ನು ತಾಜ್ ಹೋಟೆಲ್, ರೈಲು ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ 58 ಮಂದಿಯನ್ನು ಕೊಂದಿದ್ದ ಅಜ್ಮಲ್ ಕಸಬ್ನನ್ನು ಪುಣೆಯ ಯೆರವಾಡ ಜೈಲಿನಲ್ಲಿ 2012 ನವೆಂಬರ್ 21ರಂದು ಗಲ್ಲಿಗೇರಿಸಲಾಯಿತು.