ಖಾಂಡ್ವಾ, ನ 26 (DaijiworldNews/MS): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶುಕ್ರವಾರ ಮಧ್ಯಪ್ರದೇಶದ ನರ್ಮದಾ ನದಿಯ ದಡದಲ್ಲಿರುವ ಬ್ರಹ್ಮಪುರಿ ಘಾಟ್ ತಲುಪಿದೆ.
ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ, ಅವರ ಸಹೋದರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ , ಮಗ ರೈಹಾನ್ ವಾದ್ರಾ ಮತ್ತು ಅವರ ಕುಟುಂಬ ಸದಸ್ಯರು ಶುಕ್ರವಾರ ಬ್ರಹ್ಮಪುರಿ ಘಾಟ್ನ ಓಂಕಾರೇಶ್ವರ ‘ಮಾ ನರ್ಮದಾ’ ಆರತಿ ಮಾಡಿದರು.
ಆರತಿ ಬಳಿಕ ನದಿಗೆ "ಚುನಾರಿ" ಅರ್ಪಿಸಿ ದೇಶದ 12 'ಜ್ಯೋತಿರ್ಲಿಂಗ'ಗಳಲ್ಲಿ ಒಂದಾದ ಪ್ರಸಿದ್ಧ ಓಂಕಾರೇಶ್ವರ ಶಿವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ತಲೆಯ ಮೇಲೆ ಪೇಟ ಹಾಗೂ ಹೆಗಲ ಮೇಲೆ 'ಓಂ' ಬರೆದ 'ದುಪಟ್ಟಾ' ಹೊದ್ದಿದ್ದ ರಾಹುಲ್ ಗಾಂಧಿಗೆ ,ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಮತ್ತು ಅವರ ಮಗ ರೈಹಾನ್ ಕೂಡ ಆರತಿಯಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಘಾಟ್ನ ಮೆಟ್ಟಿಲುಗಳ ಮೇಲೆ ಹಸಿರು ರತ್ನಗಂಬಳಿಗಳನ್ನು ಹಾಕುವುದು ಸೇರಿದಂತೆ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದ್ದರು.