ಹೊಸಪೇಟೆ (ವಿಜಯನಗರ), ನ 25 (DaijiworldNews/DB): ಹಂಪಿಯ ಪ್ರವಾಸಿ ಮಾರ್ಗದರ್ಶಕನ ಪ್ರಾಮಾಣಿಕತೆ ಮತ್ತು ಮಾರ್ಗದರ್ಶನದ ಶೈಲಿಗೆ ಮನಸೋತ ಬೆಲ್ಜಿಯಂ ಯುವತಿಯೊಬ್ಬಳು ಆತನನ್ನೇ ಪ್ರೀತಿಸಿ ಮದುವೆಯಾದ ಪ್ರಸಂಗ ವಿಜಯನಗರದಲ್ಲಿ ನಡೆದಿದೆ. ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಇಂದು ನಡೆದ ಹಂಪಿಯ ಯುವಕ-ಬೆಲ್ಜಿಯಂ ಯುವತಿಯ ವಿವಾಹವನ್ನು ಸಾವಿರಾರು ಪ್ರವಾಸಿಗರು ಕಣ್ತುಂಬಿಕೊಂಡರು.
ಬೆಲ್ಜಿಯಂ ದೇಶದ ಕೆಮಿಲ್ ಹಾಗೂ ಪ್ರವಾಸಿ ಮಾರ್ಗದರ್ಶಿ ಅನಂತರಾಜು ಅವರೇ ಹಿಂದೂ ಸಂಪ್ರದಾಯದಂತೆ ಶ್ರೀ ವಿರೂಪಾಕ್ಷನ ಸನ್ನಿಧಿಯಲ್ಲಿ ಸರಳವಾಗಿ ಸಪ್ತಪದಿ ತುಳಿದವರು. ವಿಶ್ವಪರಂಪರೆಯ ತಾಣ ಹಂಪಿಗೆ ಕಳೆದ ಮೂರು ವರ್ಷಗಳ ಹಿಂದೆ ಬೆಲ್ಜಿಯಂನ ಮರಿಯನ್ನೇ ಜೀಮ್ ಫಿಲಿಪ್ಪೆ ಅವರ ಕುಟುಂಬ ಬಂದಿತ್ತು. ಈ ವೇಳೆ ಆಟೋ ಚಾಲಕ ಅನಂತರಾಜುವಿನ ಪರಿಚಯವಾಗಿದ್ದು, ಆತನೇ ವಿದೇಶಿ ಅತಿಥಿಗಳಿಗೆ ಹಂಪಿಯ ಮಾರ್ಗದರ್ಶನ ಮಾಡಿದ್ದ.
ಈ ವೇಳೆ ಮರಿಯನ್ನೇ ಪುತ್ರಿ ಕೆಮಿಲ್ಗೆ ಅನಂತರಾಜು ಮೇಲೆ ಪ್ರೇಮಾಂಕುರವಾಗಿದ್ದು, ಆಕೆ ಅನಂತರಾಜು ಹಾಗೂ ಆತನ ಮನೆಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಬಳಿಕ ಇಬ್ಬರಿಗೂ ಒಪ್ಪಿಗೆಯಾಗಿದ್ದು, ಮನೆಯವರೂ ಇಬ್ಬರ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಹೀಗಾಗಿ ವಿವಾಹ ನಿಶ್ಚಿತಾರ್ಥವೂ ನೆರವೇರಿತ್ತು. ಬಳಿಕ ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಮದುವೆ ಮುಂದೂಡಲ್ಪಟ್ಟಿತ್ತು. ಇದೀಗ ಇಂದು ಇಬ್ಬರೂ ಸಪ್ತಪದಿ ತುಳಿದಿದ್ದಾರೆ.
ಕೆಮಿಲ್ ಪೋಷಕರು ಬೆಲ್ಜಿಯಂನಲ್ಲೇ ಅದ್ದೂರಿಯಾಗಿ ವಿವಾಹ ನೆರವೇರಿಸಬೇಕೆಂದಿದ್ದರು. ಆದರೆ ಅನಂತರಾಜು ಅವರು ಹಂಪಿ ಶ್ರೀ ವಿರೂಪಾಕ್ಷನ ಸನ್ನಿಧಿಯಲ್ಲಿ ಸರಳವಾಗಿ ವಿವಾಹವಾಗುವ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಲ್ಲೇ ವಿವಾಹ ಕಾರ್ಯ ನೆರವೇರಿದೆ. ಕೆಮಿಲ್ ಕುಟುಂಬದ 50ಕ್ಕೂ ಹೆಚ್ಚು ಮಂದಿ ಮದುವೆಗಾಗಿ ಹಂಪಿಗೆ ಆಗಮಿಸಿದ್ದರು.