ನವದೆಹಲಿ, ನ 25 (DaijiworldNews/DB): ಭಾರತದ ಇತಿಹಾಸ ಗುಲಾಮಗಿರಿಯದ್ದಲ್ಲ, ಯೋಧರ ಸಾಹಸಗಾಥೆಯದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತದ ಇತಿಹಾಸವನ್ನು ಪುನಃ ಬರೆಯಿರಿ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು 17ನೇ ಶತಮಾನದ ಅಹೋಮ್ ಜನರಲ್ ಲಚಿತ್ ಬರ್ಪುಕನ್ ಅವರ 400ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಇತಿಹಾಸದಲ್ಲಿನ ತಪ್ಪುಗಳನ್ನು ಸರಿಪಡಿಸಲು ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ ಎಂದರು.
ಯೋಧರ, ವಿಜಯದ ಇತಿಹಾಸವೇ ಭಾರತದ ಇತಿಹಾಸ. ತ್ಯಾಗ, ನಿಸ್ವಾರ್ಥ ಮತ್ತು ಧೈರ್ಯದ ಇತಿಹಾಸ ನಮ್ಮದು. ಇದೇ ದೇಶದ ನೈಜ ಇತಿಹಾಸ. ಆದರೆ ದುರಾದೃಷ್ಟವೆಂಬಂತೆ ಸ್ವಾತಂತ್ರ್ಯದ ಬಳಿಕವೂ ಸುಳ್ಳಿನ ಇತಿಹಾಸ ಮುಂದುವರಿಸಲಾಗಿದೆ. ವಸಾಹತುಶಾಹಿ ಕಾಲದ ಸಂಚಿನ ಭಾಗವಾಗಿ ಈ ಸುಳ್ಳು ನಿರಂತರವಾಗಿ ಸತ್ಯದಂತೆ ಬಿಂಬಿಸಲ್ಪಟ್ಟಿದೆ ಎಂದು ಮೋದಿ ಹೇಳಿದರು.
ಗುಲಾಮಗಿರಿ ಇತಿಹಾಸ ನಮ್ಮದಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅಂತಹ ಇತಿಹಾಸ ಬದಲಾಗಬೇಕಿತ್ತು. ಆದರೆ ಅದು ಆಗಿಲ್ಲ. ದೇಶದ ಪ್ರತಿ ಹಳ್ಳಿಗಳಲ್ಲಿಯೂ ಹೋರಾಟದ ಇತಿಹಾಸವಿದ್ದು, ಉದ್ದೇಶಪೂರ್ವಕವಾಗಿ ಅಂತಹ ಇತಿಹಾಸವನ್ನು ಮರೆಮಾಚುವ ಯತ್ನ ನಡೆದಿದೆ. ಆದರೆ ಅವುಗಳನ್ನು ಮುನ್ನೆಲೆಗೆ ತಂದು ದೇಶದ ನೈಜ ಇತಿಹಾಸವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಪ್ರತಿಪಾದಿಸಿದರು.