ಮಧುರೈ, ನ 25 (DaijiworldNews/DB): ಒಂದು ವರ್ಷದ ಮಗುವಿಗೆ ವೈದ್ಯರು ನಾಲಿಗೆ ಬದಲು ಜನನಾಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ಘಟನೆ ತಮಿಳುನಾಡಿನ ಮಧುರೈ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ವಿರುದುನಗರ ಜಿಲ್ಲೆಯ ಅಮೀರಪಾಳ್ಯದ ಕಾರ್ತಿಕಾ ಮತ್ತು ಅಜಿತ್ ಕುಮಾರ್ ಅವರ ಮಗುವಿಗೆ ನಾಲಿಗೆ ಶಸ್ತ್ರಚಿಕಿತ್ಸೆ ಬದಲಾಗಿ ಮಧುರೈನ ರಾಜಾಜಿ ಆಸ್ಪತ್ರೆಯ ವೈದ್ಯರು ಜನನಾಂಗಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದೀಗ ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಏನಿದು ಘಟನೆ?
ಕಳೆದ ಅಕ್ಟೋಬರ್ನಲ್ಲಿ ಜನಿಸಿದ್ದ ಕಾರ್ತಿಕಾ ಮತ್ತು ಅಜಿತ್ ಕುಮಾರ್ ದಂಪತಿಯ ಮಗುವಿಗೆ ನಾಲಿಗೆಯ ಶಸ್ತ್ರಚಿಕಿತ್ಸೆಗೆ ವೈದ್ಯರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಒಂದು ಶಸ್ತ್ರಚಿಕಿತ್ಸೆ ನವಜಾತ ಶಿಶು ಹಂತದಲ್ಲಿಯೇ ಆಗಿತ್ತು. ಎರಡನೇ ಶಸ್ತ್ರಚಿಕಿತ್ಸೆಗಾಗಿ ವರ್ಷ ಕಳೆದ ಬಳಿಕ ಬರಲು ಹೇಳಿದ್ದರಿಂದ ಈ ತಿಂಗಳ ಆರಂಭದಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿತ್ಯ ತಪಾಸಣೆ ಬಳಿಕ ಮಗುವನ್ನು ವೈದ್ಯರು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ನಡೆಸಿ ಬಳಿಕ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಈ ವೇಳೆ ಮಗುವಿನ ನಾಲಿಗೆಯ ಬದಲಾಗಿ ಜನನಾಂಗದ ಶಸ್ತ್ರಚಿಕಿತ್ಸೆ ನಡೆಸಿರುವುದನ್ನು ನೋಡಿ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ಆಸ್ಪತ್ರೆ ಸಿಬಂದಿಯೊಂದಿಗೆ ವಿಚಾರ ತಿಳಿಸಿದಾಗ ಮತ್ತೆ ಮಗುವನ್ನು ನಾಲಿಗೆಯ ಶಸ್ತ್ರಚಿಕಿತ್ಸೆಗಾಗಿ ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಗಿದೆ.
ಇನ್ನು ಈ ಕುರಿತು ಮಗುವಿನ ಪೋಷಕರು ಪೊಲೀಸರಿಗೆ ದೂರು ನೀಡಿದ ಬಳಿಕ ಆಸ್ಪತ್ರೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಮಗುವಿಗನ ಜನನಾಂಗದ ಮುಂದೊಗಲು ಕಿರಿದಾಗಿತ್ತು. ಹೀಗಾಗಿ ಜನನಾಂಗದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈಗ ಮಗು ಸರಿಯಾಗಿ ಆಹಾರ ತಿನ್ನುವುದರೊಂದಿಗೆ ಮೂತ್ರ ವಿಸರ್ಜನೆಯನ್ನೂ ಸರಿಯಾಗಿ ಮಾಡುತ್ತಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.