ನವದೆಹಲಿ, ನ 25 (DaijiworldNews/DB): ಬಿಜೆಪಿ ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಅವರ ಹತ್ಯೆಗೆ ಸಂಚು ರೂಪಿಸಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಗುಜರಾತ್ ಚುನಾವಣೆ ಮತ್ತು ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಆತಂಕ ಎದುರಾಗಿದೆ. ಇದಕ್ಕಾಗಿ ಕೇಜ್ರೀವಾಲ್ ಅವರನ್ನು ಕೊಲೆಗೈಯಲು ಆ ಪಕ್ಷ ಸಂಚು ಹೂಡಿದೆ. ಬಿಜೆಪಿ ನಾಯಕ ಮನೋಜ್ ತಿವಾರಿ ಅವರು ಕೇಜ್ರೀವಾಲ್ ವಿರುದ್ದ ಬಳಸಿರುವ ಭಾಷೆ ಬಹಿರಂಗ ಬೆದರಿಕೆಯೊಡ್ಡಿದಂತಿದೆ. ಈ ಸಂಬಂಧ ತನಿಖೆ ನಡೆಸಬೇಕು. ಅಲ್ಲದೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು ಎಂದರು.
ಬಹಿರಂಗ ಬೆದರಿಕೆ ಹಾಕಿದ ಮನೋಜ್ ತಿವಾರಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ ಅವರು, ಎಎಪಿ ಇಂತಹ ಕೀಳು ಮಟ್ಟದ ರಾಜಕೀಯಕ್ಕೆ ಹೆದರುವುದಿಲ್ಲ ಎಂದು ತಿಳಿಸಿದರು.
ಇನ್ನು ಸಿಸೋಡಿಯಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮನೋಜ್ ತಿವಾರಿ, ಸಿಸೋಡಿಯಾ ಅವರು ಬಿಜೆಪಿ ಕೇಜ್ರೀವಾಲ್ರನ್ನು ಕೊಲ್ಲಲು ಸಂಚು ರೂಪಿಸಿದೆ ಎಂಬುದಾಗಿ ಹಳೆಯ ಕಟ್ಟುಕತೆಯನ್ನು ಪುನಃ ಓದುತ್ತಿದ್ದಾರೆ. ಒಂದೆಡೆ ಸಿಸೋಡಿಯಾ ಬಂಧನವಾಗುತ್ತದೆ ಎಂದು ಕೇಜ್ರೀವಾಲ್ ಹೇಳಿದರೆ ಇನ್ನೊಂದೆಡೆ ಕೇಜ್ರೀವಾಲ್ ಹತ್ಯೆ ಬಗ್ಗೆ ಸಿಸೋಡಿಯಾ ಶಕುನ ನುಡಿಯುತ್ತಿದ್ದಾರೆ. ವಾಸ್ತವವಾಗಿ ಇವರಿಬ್ಬರು ಏನು ಮಾತನಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಅರವಿಂದ ಕೇಜ್ರೀವಾಲ್ ಅವರ ಭದ್ರತೆ ಬಗ್ಗೆ ನನಗೆ ಕಳವಳವಾಗುತ್ತಿದೆ. ಭ್ರಷ್ಟಾಚಾರ, ಎಂಸಿಡಿ ಚುನಾವಣೆ ಟಿಕೆಟ್ ಮಾರಾಟ, ಅತ್ಯಾಚಾರಿಗಳೊಂದಿಗೆ ಸ್ನೇಹ, ಜೈಲಿನಲ್ಲೇ ಮಸಾಜ್ ಮುಂತಾದ ವಿಷಯಗಳಿಂದಾಗಿ ಜನ ಮತ್ತು ಎಎಪಿ ಕಾರ್ಯಕರ್ತರಿಗೆ ಅಸಮಾಧಾನ ಉಂಟಾಗಿದೆ. ಅಲ್ಲದೆ ಎಎಪಿಯ ಶಾಸಕರ ಮೇಲೆಯೂ ಹಲ್ಲೆ ನಡೆದಿದ್ದು, ದೆಹಲಿ ಸಿಎಂಗೆ ಈ ರೀತಿ ಆಗದಿರಲಿ ಎಂದು ತಿವಾರಿ ಟ್ವೀಟ್ ಮಾಡಿದ್ದರು.