ಜೋಧಪುರ, ನ 25 (DaijiworldNews/DB): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಬಂಡಾಯ ಸಮರ ಇದೀಗ ತಾರಕಕ್ಕೇರಿದೆ.
ಸಚಿನ್ ಪೈಲಟ್ ಅವರೊಂದಿಗೆ 10 ಮಂದಿ ಶಾಸಕರೂ ಇಲ್ಲ ಎಂದು ನಿನ್ನೆಯಷ್ಟೇ ಹೇಳಿದ್ದ ಅಶೋಕ್ ಗೆಹ್ಲೋಟ್ ಅವರಿಗೆ ತಿರುಗೇಟು ನೀಡಿರುವ ಸಚಿವ ರಾಜೇಂದ್ರ ಸಿಂಗ್ ಗುಧ, ಶೇ 80ರಷ್ಟು ಶಾಸಕರು ಸಚಿನ್ ಪೈಲಟ್ ಅವರೊಂದಿಗಿದ್ದಾರೆ. ಅವರೊಬ್ಬ ಒಳ್ಳೆಯ ಮುಖಂಡ ಎಂದಿದ್ದಾರೆ.
ಇನ್ನು ಸಚಿನ್ ಪೈಲಟ್ ಬೆನ್ನಿಗೆ ಚೂರಿ ಹಾಕಿದ ನಂಬಿಕೆ ದ್ರೋಹಿಯಾಗಿದ್ದು, ಪಕ್ಷದ ವಿರುದ್ದವೇ ಬಂಡಾಯವೆದ್ದಿದ್ದರು ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿನ್ ಪೈಲಟ್, ಗೆಹ್ಲೋಟ್ ಅವರೊಬ್ಬ ಹಿರಿಯ ನಾಯಕ. ಅಂತಹ ಹಿರಿಯರು ಭಾಷೆ ಬಳಕೆ ಬಗ್ಗೆ ಗಮನ ಹರಿಸಬೇಕು. ಕೆಸರೆರಚಾಟ ನಡೆಸುವುದರಿಂದ ಯಾವ ಪ್ರಯೋಜನವೂ ಉಂಟಾಗದರು. ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಲು ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಎಲ್ಲರೂ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಪೈಲಟ್ ನಂಬಿಕೆದ್ರೋಹಿ. ಬೆನ್ನಿಗೆ ಚೂರಿ ಹಾಕಿದವರು. ಅವರೊಂದಿಗೆ 10 ಮಂದಿ ಶಾಸಕರೂ ಇಲ್ಲ. ಅವರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ ಎಂದು ಗೆಹ್ಲೋಟ್ ಹೇಳಿದ್ದರು. ಅಲ್ಲದೆ 2020ರಲ್ಲಿ ಅವರು ಉಪ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರಾಗಿದ್ದಾಗ, ಸ್ವಪಕ್ಷದ ವಿರುದ್ದವೇ ಬಂಡಾಯವೆದ್ದಿದ್ದರು. ಇದಕ್ಕೆ ಅವರಿಗೆ ಅಮಿತ್ ಶಾ ಮತ್ತು ಬಿಜೆಪಿಯ ಇತರ ನಾಯಕರು ಬೆಂಬಲ ನೀಡಿದ್ದರು. ಬಂಡಾಯವೆದ್ದ ಎಲ್ಲಾ ಶಾಸಕರಿಗೆ ಬಿಜೆಪಿ ತಲಾ 10 ಕೋಟಿ ರೂ. ನೀಡಿತ್ತು ಎಂದು ಮಾಧ್ಯಮ ಸಂದರ್ಶನದಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಗಂಭೀರ ಆರೋಪ ಮಾಡಿದ್ದರು.