ಬೆಂಗಳೂರು, ನ 25 (DaijiworldNews/DB): ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಹಸ್ತಾಂತರಿಸಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಈ ಕುರಿತು ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಪ್ರಕರಣದ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸುವ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸ್ಪೋಟ ಪ್ರಕರಣದ ತನಿಖೆ ಸಂದರ್ಭದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳು ಮತ್ತು ಮಾಹಿತಿಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಯ ಅಡಿಯಲ್ಲಿ ಪ್ರಕರಣವನ್ನು ತನಿಖೆ ಮಾಡಲು ಶಿಫಾರಸು ಮಾಡಲಾಗಿದೆ ಎಂದರು.
ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಅಪರಿಚಿತ ಇಸ್ಲಾಮಿಕ್ ಸಂಘಟನೆಯೊಂದು ನವೆಂಬರ್ 19ರ ಸ್ಫೋಟದ ಹೊಣೆ ಹೊತ್ತುಕೊಂಡಿದ್ದಲ್ಲದೆ, ಭವಿಷ್ಯದಲ್ಲಿ ಇನ್ನೊಂದು ದಾಳಿಯ ಎಚ್ಚರಿಕೆ ನೀಡಿದೆ. ಇದೇ ವೇಳೆ ಸ್ಪೋಟ ಪ್ರಕರಣ ತನಿಖೆಗಾಗಿ ಮಂಗಳೂರಿನಲ್ಲಿರುವ ಹಾಗೂ ತನಿಖೆ ಮೇಲ್ವಿಚಾರಣೆ ವಹಿಸಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಅವರಿಗೂ ಈ ಅಪರಿಚಿತ ಸಂಘಟನೆಯು ಬೆದರಿಕೆ ಹಾಕಿದೆ. ನಿಮ್ಮ ಸಂತೋಷ್ ಅಲ್ಪಕಾಲದ್ದಾಗಿದೆ ಎಂದು ಸಂಘಟನೆಯು ಅಲೋಕ್ಕುಮಾರ್ ಅವರಿಗೆ ಬೆದರಿಕೆ ಹಾಕಿತ್ತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿಕೊಂಡು ಪ್ರಕರಣವನ್ನು ಎನ್ಐಎ ತನಿಖೆಗೊಳಪಡಿಸುವ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎಂದು ಗೃಹ ಸಚಿವರು ವಿವರಿಸಿದರು.
ಅಪರಿಚಿತ ಸಂಘಟನೆಯೊಂದರಿಂದ ಬಂದಿರುವ ಬೆದರಿಕೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಕೇಂದ್ರ ತನಿಖಾ ಸಂಸ್ಥೆಗಳು ಈಗಾಗಲೇ ತನಿಖೆ ಆರಂಭಿಸಿವೆ. ಇನ್ನು ಸ್ಪೋಟಗಳನ್ನು ನಡೆಸಿ ಹಿಂದೂ ಸಂಘಟನೆಗಳ ಮೇಲೆ ಆರೋಪ ಹೊರಿಸುವುದು ಹಾಗೂ ಹಿಂದೂ ಭಯೋತ್ಪಾದನೆ ಕುರಿತು ಚರ್ಚೆಯಾಗುವಂತೆ ಮಾಡುವ ಸಂಚು ಭಯೋತ್ಪಾದಕರದ್ದಾಗಿತ್ತು ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ನವೆಂಬರ್ 19ರಂದು ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿದೆ. ಕರಾವಳಿಯಲ್ಲಿ ಮತ್ತು ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಉತ್ತೇಜಿಸುವ ಸಲುವಾಗಿ ದೊಡ್ಡ ಪ್ರಮಾಣದಲ್ಲಿ ಸ್ಪೋಟ ನಡೆಸಲು ಈ ಕುಕ್ಕರ್ ಬಾಂಬ್ನ್ನು ತಯಾರಿಸಲಾಗಿತ್ತು.
ಸದ್ಯ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರಿಕ್ ತೀವ್ರ ಸುಟ್ಟು ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರಂಭದಲ್ಲಿ ಈತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಬಳಿಕ, ಆರೆಸ್ಸೆಸ್ ಅಂಗಸಂಸ್ಥೆಯೊಂದು ಆಯೋಜಿಸಿದ್ದ ಮಕ್ಕಳ ಉತ್ಸವದಲ್ಲಿ ಸ್ಪೋಟ ನಡೆಸಲು ಉದ್ದೇಶಿಸಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.