ನವದೆಹಲಿ, ನ 25 (DaijiworldNews/MS): "ಒಂದು ದಿನದ ಮಟ್ಟಿಗೆ ನನಗೆ ಸಿಬಿಐ, ಇಡಿ (ಜಾರಿ ನಿರ್ದೇಶನಾಲಯ) ನಿಯಂತ್ರಣವನ್ನು ನೀಡಿ, ಬಿಜೆಪಿಯ ಅರ್ಧದಷ್ಟು ನಾಯಕರು ಜೈಲಿನಲ್ಲಿರುತ್ತಾರೆ" ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಕೇಜ್ರಿವಾಲ್ "ಕಳೆದ ಏಳು ವರ್ಷಗಳಲ್ಲಿ, ಎಎಪಿ ನಾಯಕರ ವಿರುದ್ಧ 167 ಪ್ರಕರಣಗಳನ್ನು ದಾಖಲಿಸಲಾಗಿದ್ದು ಅವುಗಳಲ್ಲಿ ನ್ಯಾಯಾಲಯದಲ್ಲಿ ಒಂದೂ ಕೂಡಾ ಸಾಬೀತಾಗಿಲ್ಲ. ಎಎಪಿ ನಾಯಕರನ್ನು 150 ಕ್ಕೂ ಹೆಚ್ಚು ಪ್ರಕರಣಗಳಿಂದ ಮುಕ್ತಗೊಳಿಸಲಾಗಿದ್ದು , ಉಳಿದವುಗಳು ಬಾಕಿ ಉಳಿದಿವೆ. ತನಿಖಾ ಸಂಸ್ಥೆಗಳ ಸುಮಾರು 800ಕ್ಕೂ ಹೆಚ್ಚು ಅಧಿಕಾರಿಗಳನ್ನು ಎಎಪಿ ನಾಯಕರ ತಪ್ಪುಗಳನ್ನು ಕಂಡುಹಿಡಿಯಲು ಮಾತ್ರ ಮೀಸಲಿಟ್ಟಿದ್ದಾರೆ. ಆದರೆ ಅವರಿಗೆ ಈವರೆಗೆ ಏನೂ ಸಿಕ್ಕಿಲ್ಲ. ಮಾತ್ರವಲ್ಲದೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ ಕಾರಣ ಈ ತನಿಖಾ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಹೇಳಿದ್ದಾರೆ.
ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಚಿವ ಸತ್ಯೇಂದ್ರ ಜೈನ್ ಕಳೆದ ಆರು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಅಬಕಾರಿ ನೀತಿ 2021-22ರ ಅನುಷ್ಠಾನ ಹಗರಣದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಎಫ್ಐಆರ್ನಲ್ಲಿ ಆರೋಪಿ ಎಂದು ಹೆಸರಿಸಿದೆ ಮತ್ತು ಪಕ್ಷದ ಉಸ್ತುವಾರಿ ವಿಜಯ್ ನಾಯರ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕಸ್ಟಡಿಯಲ್ಲಿದ್ದಾರೆ. ಈ ಎಲ್ಲಾ ಪ್ರಕರಣಗಳನ್ನು ಎಎಪಿ ರಾಜಕೀಯ ಪ್ರೇರಿತ ಎಂದು ಹೇಳಿದೆ.