ಬೆಂಗಳೂರು, ನ 24 (DaijiworldNews/MS): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಾಟ್ ಟಾಪಿಕ್ ಆಗಿದ್ದ ಪರೇಶ್ ಮೇಸ್ತಾ ಅನುಮಾನಸ್ಪದ ಸಾವಿನ ಪ್ರಕರಣವನ್ನ ಈ ಬಾರಿ ಕಾಂಗ್ರೆಸ್ ಬಳಸಿಕೊಳ್ಳುತ್ತಿರುವಂತೆ ಕಾಣುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ " ಪರೇಶ್ ಮೇಸ್ತಾನಂತವರ ಸಮಾಧಿ ಮೇಲೆ ಸಾಮ್ರಾಜ್ಯ ಕಟ್ಟಿದ ಬಿಜೆಪಿ ಇಂದು ಮೌನವೇಕೆ? ಹೆಣ ಕಂಡರೆ ರಣ ಹದ್ದುಗಳಂತೆ ಬರುವ ಬಿಜೆಪಿ ಕರ್ನಾಟಕದ ಶಾಂತಿ ಸೌಹಾರ್ದತೆಗೆ ಕೊಳ್ಳಿ ಇಡುವ ಎಲ್ಲಾ ಅವಕಾಶಗಳನ್ನೂ ಬಳಸಿ ನೀಚ ಕೃತ್ಯಗಳನ್ನ ಎಸಗಿದೆ.ಅಂದು ಪರೇಶ್ ಮೇಸ್ತಾನ ಹೆಸರಲ್ಲಿ ಗಲಭೆ ಎಬ್ಬಿಸಿದ್ದ ಬಿಜೆಪಿ ಇಂದು ರಾಜ್ಯದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.
2017ರ ಡಿಸೆಂಬರ್ನಲ್ಲಿ ಪರೇಶ್ ಮೇಸ್ತ ಎಂಬ ಮೀನುಗಾರರ ಸಮುದಾಯದ ಯುವಕ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಸ್ ನಿಲ್ದಾಣದ ಮುಂದಿನ ಶೆಟ್ಟಿ ಕೆರೆ ಎಂಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಕೋಮು ದ್ವೇಷದಿಂದಲೇ ಕೊಲೆ ಮಾಡಿರುವುದಾಗಿ ಬಿಜೆಪಿ ನಾಯಕರು, ಕಾರ್ಯಕರ್ತರು ಬೀದಿಗಿಳಿದು ಅಂದು ಬೃಹತ್ ಹೋರಾಟ, ಪ್ರತಿಭಟನೆಗಳನ್ನ ನಡೆಸಿದ್ದರು. ಅಂದಿನ ಕಾಂಗ್ರೆಸ್ ಸರ್ಕಾರಕ್ಕೂ ಈ ಪ್ರಕರಣ ಮುಜುಗರ ತಂದಿತ್ತು.
ಸದ್ಯ ಇದೇ ಪ್ರಕರಣ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಜೀವ ಪಡೆದುಕೊಂಡಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಪ್ರಕರಣವನ್ನ ಮುನ್ನೆಲೆಗೆ ತಂದಿದೆ.