ಡೆಹ್ರಾಡೂನ್, ನ 24 (DaijiworldNews/DB): ಗುಂಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದ ರೋಗಿಗೆ ರಕ್ತದ ಅವಶ್ಯಕತೆ ಇದ್ದುದರಿಂದ ಶಸ್ತ್ರಚಿಕಿತ್ಸೆಗೂ ಮುನ್ನ ವೈದ್ಯರೇ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಡೆಹದ್ರಾಡೂನ್ನ ಈ ವೈದ್ಯನ ಕಳಕಳಿಗೆ ಶ್ಲಾಘನೆ ವ್ಯಕ್ತವಾಗಿದೆ.
ಡೆಹ್ರಾಡೂನ್ನ ಡೂನ್ ಪಿಜಿ ವೈದ್ಯಕೀಯ ಕಾಲೇಜಿನ ಮೂಳೆ ಚಿಕಿತ್ಸಕ ವೈದ್ಯ ಡಾ. ಶಶಾಂಕ್ ಸಿಂಗ್ ಅವರೇ ರೋಗಿಗೆ ರಕ್ತದಾನ ಮಾಡಿದ ವೈದ್ಯ. ವ್ಯಕ್ತಿಯೊಬ್ಬ ಗುಂಡಿಗೆ ಬಿದ್ದು ಗಂಭೀರ ಗಾಯಗೊಂಡು ಡೆಹ್ರಾಡೂನ್ನ ಡೂನ್ಪಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಎದೆ, ಎಡಗೈ ಹಾಗೂ ತೊಡೆಯ ಮೂಳೆ ಮುರಿದು ರೋಗಿ ನೋವಿನಿಂದ ನರಳಾಡುತ್ತಿದ್ದರು. ಮೂರು ದಿನ ರೋಗಿಯನ್ನು ಐಸಿಯುವಿನಲ್ಲಿಟ್ಟು, ಬಳಿಕ ತೊಡೆಯ ಮೂಳೆ ಶಸ್ತ್ರಚಿಕಿತ್ಸೆಗೆ ನಿರ್ಧರಿಸಲಾಗಿತ್ತು. ಆದರೆ ರೋಗಿಯಲ್ಲಿ ರಕ್ತದ ಕೊರತೆಯಿದ್ದುದರಿಂದಾಗಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗಿರಲಿಲ್ಲ. ರೋಗಿಯ ಪುತ್ರಿ ರಕ್ತದಾನಕ್ಕೆ ಮುಂದಾದರೂ, ಆಕೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿದ್ದ ಹಿನ್ನೆಲೆಯಲ್ಲಿ ಆಕೆಯ ರಕ್ತ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಬೇಕಾದ ವೈದ್ಯ ಡಾ. ಶಶಾಂಕ್ ಸಿಂಗ್ ಅವರೇ ರಕ್ತದಾನ ಮಾಡಿ, ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ರೋಗಿಯ ಜೀವ ಉಳಿಸಿದ್ದಾರೆ.
ವೈದ್ಯ ಡಾ. ಶಶಾಂಕ್ ಸಿಂಗ್ ಅವರ ಈ ಮಾನವೀಯ ಕಳಕಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕರ್ತವ್ಯನಿಷ್ಠೆಯೊಂದಿಗೆ ಮಾನವೀಯತೆ ಮೆರೆದ ವೈದ್ಯನ ಕಳಕಳಿಗೆ ರೋಗಿಯ ಕಡೆಯವರೂ ಧನ್ಯವಾದ ಸಲ್ಲಿಸಿದ್ದಾರೆ.