ಉತ್ತರ ಪ್ರದೇಶ, ನ 24 (DaijiworldNews/DB): ದೆಹಲಿಯ ಶ್ರದ್ದಾ ವಾಕರ್ ಭೀಕರ ಹತ್ಯೆ ಪ್ರಕರಣ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಅದೇ ಮಾದರಿಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿಯನ್ನು ಕೊಲೆಗೈದು ದೇಹವನ್ನು ಕತ್ತರಿಸಿ ವಿವಿಧೆಡೆ ಎಸೆದಿದ್ದಾನೆ.
ಸ್ನೇಹಾ ಕೊಲೆಯಾದ ದುರ್ದೈವಿ. ಆಕೆಯ ಪತಿ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿರುವ ಪಂಕಜ್ ಮೌರ್ಯ ಆರೋಪಿ. ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ ಪಂಕಜ್ ಹಾಗೂ ಸ್ನೇಹಾ ನಡುವೆ ಇತ್ತೀಚೆಗೆ ಗಲಾಟೆ ನಡೆಯುತ್ತಿತ್ತು. ಆಕೆ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದಳು ಎನ್ನಲಾಗಿದೆ. ಅಲ್ಲದೆ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಲ್ಲದೆ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ ಎಂದೂ ಹೇಳಲಾಗುತ್ತಿದೆ. ಪತ್ನಿಯ ನಡವಳಿಕೆಯಿಂದ ವಿಚಲಿತನಾದ ಪತಿ ಪಂಕಜ್ ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಅದರಂತೆ ಸ್ನೇಹಿತರ ಸಹಕಾರ ಪಡೆದು ಪತ್ನಿಯನ್ನು ಕೊಲೆಗೈದು ಗುರುತು ಸಿಗಬಾರದೆಂದು ದೇಹವನ್ನು ಕತ್ತರಿಸಿ ಸೀತಾಪುರ ಜಿಲ್ಲೆಯ ಒಂದು ಕಡೆ ಸೇರಿದಂತೆ ವಿವಿಧೆಡೆ ಎಸೆದಿದ್ದಾನೆ.
ನವೆಂಬರ್ 8ರಂದು ಸೀತಾಪುರ ಪೊಲೀಸರು ಸ್ನೇಹಾಳ ಮೃತದೇಹದ ಭಾಗಗಳನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ ಈ ವೇಳೆ ಪತಿಯನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕೊಲೆ ಮಾಡಿರುವ ಸತ್ಯವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ. ಬಳಿಕ ಪಂಕಜ್ ಮೌರ್ಯ ಹಾಗೂ ಆತನ ಸ್ನೇಹಿತ ದುರ್ಜನ್ನನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.