ಜೈಪುರ್, ನ 24 (DaijiworldNews/DB): ಡಿಜಿಟಲ್ ಮಾಧ್ಯಮಗಳ ನೋಂದಣಿ, ಕಾರ್ಯ ನಿರ್ವಹಣೆ ಮತ್ತು ನಿಯಂತ್ರಣ ಸಲುವಾಗಿ ಕೇಂದ್ರ ಸರ್ಕಾರ ದೇಶದಲ್ಲಿ ಶೀಘ್ರ ಹೊಸ ಕಾನೂನನ್ನು ಜಾರಿಗೊಳಿಸಲಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿದ್ಯುನ್ಮಾನ ಹಾಗೂ ಡಿಜಿಟಲ್ ಮಾಧ್ಯಮಗಳು ಬಂದ ಬಳಿಕ ಸುದ್ದಿ ಸಂವಹನವು ಬಹು ಆಯಾಮದ ರೂಪ ಪಡೆದುಕೊಂಡಿದೆ. ಹಳ್ಳಿ ಹಳ್ಳಿಗಳ ಸುದ್ದಿಯೂ ರಾಷ್ಟ್ರ ಮಟ್ಟಕ್ಕೆ ತಲುಪಲು ಡಿಜಿಟಲ್ ಮಾಧ್ಯಮ ಕಾರಣವಾಗಿದೆ. ಆದರೆ ಇದಕ್ಕೆ ಉತ್ತಮ ಭವಿಷ್ಯವಿರುವುದರ ಜೊತೆಗೆ ಹಲವಾರು ರೀತಿಯ ಸವಾಲುಗಳೂ ಇವೆ. ಭವಿಷ್ಯ ಮತ್ತು ಸವಾಲುಗಳನ್ನು ಸರಿದೂಗಿಸಲು ಕಾನೂನು ಅವಶ್ಯಕವೆಂಬುದನ್ನು ಮನಗಂಡು ಕೇಂದ್ರ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎಂದರು.
ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಅರ್ಹ ಪತ್ರಕರ್ತರಿಗೆ ಮಾನ್ಯತೆ ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ. ಅಲ್ಲದೆ ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಕಾಯ್ದೆ 1867ರ ಬದಲಿಗೆ ಹೊಸ ಕಾನೂನು ಶೀಘ್ರ ಜಾರಿಯಾಗುವುದರೊಂದಿಗೆ ವಾರದೊಳಗೆ ನೋಂದಣಿಗೆ ಅವಕಾಶ ನೀಡುವ ವ್ಯವಸ್ಥೆಯೂ ಇದರಲ್ಲಿ ಇರಲಿದೆ. ಈಗಿರುವ ಕಾನೂನಿನಂತೆ ನೋಂದಣಿಗೆ ನಾಲ್ಕು ತಿಂಗಳು ಕಾಯಬೇಕಾಗುತ್ತದೆ ಎಂದವರು ತಿಳಿಸಿದರು.
ನಿಖರ ಮತ್ತು ಪಾರದರ್ಶಕ ಸುದ್ದಿಗಳಿಗೆ ಮಾಧ್ಯಮಗಳು ಆದ್ಯತೆ ನೀಡಬೇಕು. ಸರ್ಕಾರದ ಲೋಪಗಳ ಜೊತೆಗೆ ಜನಕಲ್ಯಾಣ ಯೋಜನೆ, ನೀತಿಗಳೂ ಜನಸಾಮಾನ್ಯರಿಗೆ ತಲುಪಬೇಕು. ಜವಾಬ್ದಾರಿಯುತವಾಗಿ ಮಾಧ್ಯಮಗಳು ಕೆಲಸ ಮಾಡಬೇಕು ಎಂದವರು ಇದೇ ವೇಳೆ ಸಲಹೆ ನೀಡಿದರು.