ಬೋದರ್ಲಿ, ನ 23 (DaijiworldNews/DB): ಸಮಾಜದಲ್ಲಿ ದ್ವೇಷ, ಹಿಂಸೆ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತಿರುವುದರ ವಿರುದ್ದ ನಮ್ಮ ಯಾತ್ರೆ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯ ಬೋದರ್ಲಿ ಗ್ರಾಮವನ್ನು ಬುಧವಾರ ಬೆಳಗ್ಗೆ ಪ್ರವೇಶಿಸಿದ್ದು, ಈ ವೇಳೆ ಮಾತನಾಡಿದ ಅವರು, ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಯಾತ್ರೆ ಸಾಗಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದ್ವೇಷ, ಹಿಂಸೆ, ಭಯದ ವಾತಾವರಣದ ವಿರುದ್ದ ನಮ್ಮ ಯಾತ್ರೆ ಎಂದರು.
ಯುವಕರು, ರೈತರು, ಕಾರ್ಮಿಕರಲ್ಲಿ ಬಿಜೆಪಿ ಭಯ ಹರಡುತ್ತಿದೆ. ಬಳಿಕ ಅದನ್ನು ಹಿಂಸಾಚಾರವಾಗಿ ಪರಿವರ್ತಿಸುತ್ತಾರೆ. ಇಂತಹವುಗಳ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯವಿದೆ ಎಂದು ಪ್ರತಿಪಾದಿಸಿದರು.
ಅಲ್ಲೇ ನೆರೆದಿದ್ದ ರುದ್ರ ಎಂಬ ಬಾಲಕನೊಬ್ಬನನ್ನು ವೇದಿಕೆಗೆ ಕರೆತಂದು ಆತನ ಭವಿಷ್ಯದ ಕನಸೇನೆಂದು ಕೇಳಿದಾಗ ಆತ ವೈದ್ಯನಾಗಬೇಕೆಂದು ಉತ್ತರಿಸಿದ. ಆತನ ಕನಸು ಮತ್ತು ದೇಶದಲ್ಲಿನ ವೈರುಧ್ಯ ಪರಿಸ್ಥಿತಿ ಬಗ್ಗೆ ಉಲ್ಲೇಖಿಸಿದ ರಾಹುಲ್ ಗಾಂಧಿ, ದೇಶದಲ್ಲಿ ಖಾಸಗಿ ವೈದ್ಯ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಬೇಕಾದರೆ ಕೋಟ್ಯಾಂತರ ರೂಪಾಯಿ ವ್ಯಯಿಸಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ರುದ್ರನಂತಹ ಮಕ್ಕಳಿಗೆ ಭವಿಷ್ಯದ ಕನಸುಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಅಂತಹ ಮಕ್ಕಳು ತಮ್ಮ ಕನಸುಗಳನ್ನು ಬಲಿಕೊಟ್ಟು ಕಾರ್ಮಿಕನಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿ ಹೋಗಲಾಡಿಸಬೇಕಾದ ಅಗತ್ಯ ನಮ್ಮ ದೇಶದಲ್ಲಿದೆ ಎಂದರು.