ಬೆಂಗಳೂರು, ನ 23 (DaijiworldNews/MS): ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಪ್ರತಿಯೊಂದು ಕುಟುಂಬಕ್ಕೂ ಸಿಹಿ ಸುದ್ದಿ ನೀಡಲು ಮುಂದಾಗಿದೆ.
ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ , ಪ್ರತಿ ತಿಂಗಳು ಹತ್ತು ಸಾವಿರ ಲೀಟರ್ ಕುಡಿಯುವ ನೀರನ್ನು ಉಚಿತವಾಗಿ ಕೊಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.
ಹೊಸ ವರ್ಷ ಜನವರಿಗೆ ಹೊಸ ಕೊಡುಗೆ ನೀಡಲು ಉದ್ದೇಶಿಸಿದ್ದು, ರಾಜ್ಯದ ಪ್ರತಿ ಕುಟುಂಬಕ್ಕೂ ಉಚಿತವಾಗಿ ಹತ್ತು ಸಾವಿರ ಲೀಟರ್ ಕುಡಿಯುವ ನೀರನ್ನು ಸರಬರಾಜು ಮಾಡಲು ಉದ್ದೇಶಿಸಿದೆ.
ಇದಲ್ಲದೆ ರಾಜ್ಯದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡುವ 'ಜಲ ಜೀವನ್ ಮಿಷನ್'ನ ಹರ್ಘರ್ ಜಲ್ ಯೋಜನೆ ಜಾರಿಗೆ ಬರುತ್ತಿದೆ.
ರಾಜ್ಯದ ಜನಸಂಖ್ಯೆ 7 ಕೋಟಿ ಇದೆ. ಪ್ರತಿಮನೆಗೆ ಅಂದಾಜು 4 ಜನರಂತೆ ಲೆಕ್ಕ ಹಾಕಿದರೆ 1.40 ಕೋಟಿ ಮನೆಗಳಾಗಬಹುದೆಂದು ಅಂದಾಜು ಮಾಡಲಾಗಿದೆ. 'ಜಲ ಜೀವನ್ ಮಿಷನ್'ನ ಹರ್ಘರ್ ಜಲ್ ಯೋಜನೆ ಉಚಿತ ನೀರು ಪೂರೈಕೆ ಯೋಜನೆ ಜಾರಿಗೆ ತಂದರೆ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಏನೂ ಬರುವುದಿಲ್ಲವೆಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.