ಅಹಮದಾಬಾದ್,ನ 23 (DaijiworldNews/MS): ಇತ್ತೀಚೆಗೆ ರಾಹುಲ್ ಗಾಂಧಿ ಸದ್ದಾಂ ಹುಸೇನ್ ಅವರಂತೆ ಕಾಣುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವ್ಯಂಗ್ಯವಾಡಿದ್ದಾರೆ.
ಗುಜರಾತ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಹಮದಾಬಾದ್ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಗಾಂಧಿ ವಂಶಸ್ಥರ ಚಿತ್ರವು ಮಹಾತ್ಮ ಗಾಂಧಿ ಅಥವಾ ಸರ್ದಾರ್ ಪಟೇಲ್ ಅವರ ಚಿತ್ರಣವನ್ನು ಹೋಲಬೇಕು ಹೊರತು ಇರಾಕಿನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ ಅವರಂತಲ್ಲ ಎಂದು ಕಾಂಗ್ರೆಸ್ ನಾಯಕ ಯಾವ ರೀತಿ ಕಾಣಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ನಡೆಯುತ್ತಿರುವ "ಭಾರತ್ ಜೋಡೋ ಯಾತ್ರೆ" ಕುರಿತು ಮಾತನಾಡಿದ ಶರ್ಮಾ, ಅದರ ಬಗ್ಗೆ ನನಗೆ ಹೇಳಿಕೊಲ್ಳುವಂತಹ ಯಾವುದೇ ಅಭಿಪ್ರಾಯವಿಲ್ಲ ಆದರೆ ರಾಹುಲ್ ಜೀ, ನಿಮ್ಮ ಮುಖವು ಜನರು ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರನ್ನು ನೋಡುವಂತಿರಬೇಕು, ಆದರೆ ಸದ್ದಾಂ ಹುಸೇನ್ ಅವರಂತೆ ಕಾಣಬಾರದು " ಎಂದು ವ್ಯಂಗ್ಯವಾಡಿದ್ದಾರೆ.
ಚುನಾವಣೆ ಸಮೀಪಿಸಿದರೂ ಗುಜರಾತ್ನಲ್ಲಿ ರಾಹುಲ್ ಪತ್ತೆಯಿಲ್ಲ. ಸಂದರ್ಶಕ ಅಧ್ಯಾಪಕರಂತೆ ರಾಜ್ಯಕ್ಕೆ ಬರುತ್ತಾರೆ. ಹಿಮಾಚಲ ಪ್ರದೇಶದಲ್ಲೂ ಪ್ರಚಾರ ಮಾಡಿಲ್ಲ. ಚುನಾವಣೆ ನಡೆಯದ ರಾಜ್ಯಗಳಿಗೆ ಮಾತ್ರ ಭೇಟಿ ಕೊಡುತ್ತಾರೆ. ಬಹುಶಃ ಸೋಲಿನ ಭಯ ಕಾಡುತ್ತಿರಬಹುದು ಎಂದು ಲೇವಡಿ ಮಾಡಿದ್ದಾರೆ.