ಜೈಪುರ, ನ 22 (DaijiworldNews/DB): ಲಿವ್ ಇನ್ ಸಂಗಾತಿಯಿಂದಲೇ ಹತ್ಯೆಗೊಳಗಾದ ಶ್ರದ್ದಾ ವಾಕರ್ ಕೊಲೆ ಪ್ರಕರಣವನ್ನು ಆಕಸ್ಮಿಕ ಎಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ದ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಶ್ರದ್ದಾಳನ್ನು ಕೊಲೆಗೈದಿದ್ದಲ್ಲದೆ ಆರೋಪಿ ಅಫ್ತಾರ್ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಎಸೆದಿದ್ದ. ಇಂತಹ ಭೀಕರ ಘಟನೆಯನ್ನು ಆಕಸ್ಮಿಕ ಎಂದು ಕರೆದ ರಾಜಸ್ಥಾನ ಮುಖ್ಯಮಂತ್ರಿಯವರ ಹೇಳಿಕೆ ಕುತರ್ಕದಿಂದ ಕೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಪ್ರತಿಕ್ರಿಯಿಸಿದ್ದಾರೆ.
ಮನಸ್ಥಿತಿಯ ಕದನವಾಗಿ ಈ ಘಟನೆ ನಡೆದಿದೆ. ಲವ್ ಜಿಹಾದ್, ಧಾರ್ಮಿಕ ಮತಾಂತರದ ಷಡ್ಯಂತ್ರವನ್ನು ಹೇಗೆ ಮಾಡಲಾಗುತ್ತಿದೆ ಎಂಬುದನ್ನು ಶ್ರದ್ದಾ ಕೊಲೆ ಪ್ರಕರಣ ತೋರಿಸುತ್ತದೆ. ಹೀಗಾಗಿ ಮುಖ್ಯಮಂತ್ರಿಗಳು ಇಂತಹ ಗಂಭೀರ ವಿಚಾರಗಳನ್ನು ಸಾಮಾನ್ಯ ಎಂಬಂತೆ ಹೇಳಿರುವುದು ಬೇಜವಾಬ್ದಾರಿತನದಿಂದ ಕೂಡಿದೆ ಎಂದವರು ಆಪಾದಿಸಿದ್ದಾರೆ.
ಇನ್ನು ಗೆಹ್ಲೋಟ್ ಹೇಳಿಕೆ ಖಂಡಿಸಿರುವ ರಾಜ್ಸಮಂದ್ ಬಿಜೆಪಿ ಸಂಸದೆ ದಿಯಾ ಕುಮಾರಿ, ಈ ಘಟನೆ ಹಿಂದೂ ಧರ್ಮದ ಮೇಲೆ ನಡೆದ ದಾಳಿಯಾಗಿದೆ. ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಇಂತಹ ಘಟನೆಗಳ ಬಗ್ಗೆ ಬೇಜವಾಬ್ದಾರಿಯಿಂದ ಮಾತನಾಡಿದರೆ ಅದು ಮಹಿಳೆಯರ ವಿರುದ್ದ ಹಿಂಸಾತ್ಮಕ ಅಪರಾಧ ಹೆಚ್ಚಳಕ್ಕೆ ಪ್ರಚಾರ ನೀಡಲು ಕಾರಣವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶತಮಾನಗಳಿಂದಲೂ ಅಂತರ್ಜಾತಿ, ಅಂತರ್ ಧರ್ಮೀಯ ವಿವಾಹಗಳು ನಡೆಯುತ್ತಿದ್ದು, ಇದೇನು ಹೊಸ ವಿಷಯ ಅಲ್ಲ. ಅಲ್ಲಿ ನಡೆದಿರುವ ಘಟನೆ ಆಕಸ್ಮಿಕ ಎಂದು ಶ್ರದ್ದಾ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿಕೆ ನೀಡಿದ್ದರು. ಅಲ್ಲದೆ ಬಿಜೆಪಿಯವರು ಒಂದು ಸಮುದಾಯ, ಧರ್ಮವನ್ನು ಗುರಿಯಾಗಿಸಿಕೊಂಡು ಅದರ ಮೂಲಕ ರಾಜಕೀಯ ನಡೆಸುತ್ತಿದ್ದಾರೆ. ಅವರಿಗೆ ಅದರಿಂದ ಪ್ರಯೋಜನವಿದೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು.