ಮಲಬಾರ್, ನ 22 (DaijiworldNews/DB): ನನ್ನಿಂದ ಬೇರೆಯವರಿಗೆ ಭಯವಿಲ್ಲ. ನಾನೂ ಯಾರಿಗೂ ಹೆದರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಮಲಬಾರ್ ಪ್ರವಾಸದಲ್ಲಿರುವ ಅವರು ಯುಡಿಎಫ್- ಮಿತ್ರ ಪಕ್ಷ ಐಯುಎಂಎಲ್ ನಾಯಕರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೇರಳ ಪ್ರವಾಸದಿಂದಾಗಿ ಯಾರು ಭಯ ಪಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ತರೂರ್, ನನ್ನಿಂದ ಯಾರಿಗೂ ಭಯ ಇಲ್ಲ. ಅಲ್ಲದೆ ಇತರರಿಗೂ ನಾನು ಹೆದರುವುದಿಲ್ಲ ಎಂದರು.
ಇನ್ನು ಐಯುಎಂಎಲ್ ನಾಯಕರನ್ನು ಭೇಟಿ ಮಾಡಿರುವುದು ಕೇವಲ ಒಂದು ಸೌಹಾರ್ದ ಭೇಟಿ. ಪಕ್ಷದೊಳಗೇ ಗುಂಪು ಕಟ್ಟಿಕೊಳ್ಳುವ ಉದ್ದೇಶವಾಗಲೀ, ಆಸಕ್ತಿಯಾಗಲೀ ನನಗಿಲ್ಲ. ಈ ನಿಟ್ಟಿನಲ್ಲಿ ಹರಿದಾಡುತ್ತಿರುವ ಸುದ್ದಿಗಳೆಲ್ಲ ಊಹಾಪೋಹ ಎಂದವರು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇರಳ ಕಾಂಗ್ರೆಸ್ನಲ್ಲಿ ಶಶಿ ತರೂರ್ ಅವರ ಬೆಂಬಲಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ತರೂರ್ ಗುಂಪು ಎಂಬುದಾಗಿಯೇ ಪ್ರತ್ಯೇಕ ಗುಂಪೊಂದು ಉದ್ಭವವಾಗಿರುವುದು ರಾಜ್ಯ ಮಟ್ಟದ ನಾಯಕರಲ್ಲಿ ಆತಂಕ ಸೃಷ್ಟಿಸಿದೆ ಎನ್ನಲಾಗಿದೆ.