ಮುಂಬೈ, ನ 22 (DaijiworldNews/DB): ಬಾಪೂರನ್ನು ಹತ್ಯೆ ಮಾಡಲು ನಾಥೂರಾಂ ಗೋಡ್ಸೆಗೆ ಸಮರ್ಥ ಬಂದೂಕು ಪಡೆಯಲು ಸಾವರ್ಕರ್ ಸಹಕರಿಸಿದ್ದರು ಎಂದು ಮಹಾತ್ಮಾ ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಹೇಳಿದ್ದಾರೆ. ಇದೀಗ ತುಷಾರ್ ಗಾಂಧಿಯ ಟ್ವೀಟ್ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ನವೆಂಬರ್ 20ರ ಭಾನುವಾರ ಟ್ವೀಟ್ ಮಾಡಿರುವ ತುಷಾರ್ ಗಾಂಧಿ, ಸಾವರ್ಕರ್ ಕೇವಲ ಬ್ರಿಟಿಷರಿಗೆ ಸಹಾಯ ಮಾಡಿದ್ದಲ್ಲ. ಬಾಪೂರನ್ನು ಹತ್ಯೆ ಮಾಡಲು ಗೋಡ್ಸೆಗೂ ಸಹಾಯ ಮಾಡಿದ್ದರು. ಸಮರ್ಥ ಬಂದೂಕು ಪಡೆಯಲು ಗೋಡ್ಸೆಗೆ ಸಹಕಾರ ನೀಡಿದ್ದಾರೆ. ಬಾಪುರನ್ನು ಹತ್ಯೆಗೈಯುವ ಎರಡು ದಿನ ಮೊದಲು ಗೋಡ್ಸೆ ಬಳಿ ಯಾವುದೇ ಪ್ರಬಲ ಶಸ್ತ್ರಾಸ್ತ್ರಗಳು ಇರಲಿಲ್ಲ ಎಂದಿದ್ದಾರೆ.
ಅಲ್ಲದೆ ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್ ಗಾಂಧಿ, ಇತಿಹಾಸದಲ್ಲಿ ಇರುವುದನ್ನು ನಾನು ಹೇಳಿದ್ದೇನೆಯೇ ಹೊರತು, ಯಾವುದೇ ಆರೋಪಗಳನ್ನು ಯಾರ ಮೇಲೆಯೂ ಹೊರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಪ್ರಕಾರ, ನಾಥೂರಾಂ ಗೋಡ್ಸೆ ಮತ್ತು ವಿನಾಯಕ ಆಪ್ಟೆ ಸಾವರ್ಕರ್ ಅವರು 1948ರ ಜನವರಿ 26 ಮತ್ತು 27ರಂದು ಪರಸ್ಪರ ಭೇಟಿಯಾಗಿದ್ದರು. ಆ ಭೇಟಿಯ ಮುನ್ನ ಗೋಡ್ಸೆ ಬಳಿ ಬಂದೂಕು ಆಗಲೀ, ಯಾವುದೇ ಶಸ್ತ್ರಗಳಾಗಲೀ ಇರಲಿಲ್ಲ. ಅವರಿಬ್ಬರು ಮುಂಬೈಯಿಡೀ ಬಂದೂಕು ಹುಡುಕುತ್ತಾ ಹೋಗಿದ್ದಾರೆ ಎಂಬುದು ಇತಿಹಾಸದಿಂದ ತಿಳಿದಿದ್ದೇನೆ ಎಂದರು.
ಮುಂಬೈಯಲ್ಲಿ ಬಂದೂಕು ಹುಡುಕುತ್ತಾ ಸುತ್ತಾಡಿದ ಬಳಿಕ ಅಲ್ಲಿಂದ ದೆಹಲಿ, ಬಳಿಕ ಗ್ವಾಲಿಯರ್ಗೆ ಹೋಗಿದ್ದಾರೆ. ಗ್ವಾಲಿಯರ್ನಲ್ಲಿ ಅವರಿಗೆ ಪಿಸ್ತೂಲ್ ಸಿಕ್ಕಿದೆ. ಆನಂತರದ ಎರಡು ದಿನಗಳಲ್ಲಿ ಬಾಪೂ ಹತ್ಯೆಯಾಗಿದೆ. ಇದು ಆರೋಪವಲ್ಲ ಎಂದು ತಿಳಿಸಿದರು.