ನವದೆಹಲಿ, ನ 22 (DaijiworldNews/DB): ಶ್ರದ್ದಾ ವಾಕರ್ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲನ ಪಾಲಿಗ್ರಾಫ್ ಪರೀಕ್ಷೆ ನಡೆಸಲು ದೆಹಲಿ ಪೊಲೀಸರಿಗೆ ನ್ಯಾಯಾಲಯ ಮಂಗಳವಾರ ಅನುಮತಿ ನೀಡಿದೆ.
ತನ್ನ ಲಿವ್ ಸಂಗಾತಿ ಶ್ರದ್ದಾಳನ್ನು ಕೊಲೆಗೈದು ದೇಹವನ್ನು 35 ತುಂಡುಗಳಾಗಿ ಅರಣ್ಯದಲ್ಲಿ ಬಿಸಾಡಿದ್ದ ಅಫ್ತಾಬ್ ಕಳೆದ ಕೆಲ ದಿನಗಳ ಹಿಂದಷ್ಟೇ ಬಂಧಿಸಲ್ಪಟ್ಟಿದ್ದ. ಈತನನ್ನು ಪಾಲಿಗ್ರಾಫ್ ಪರೀಕ್ಷೆಗೊಳಪಡಿಸಲು ದೆಹಲಿ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಮಂಗಳವಾರ ಪಾಲಿಗ್ರಾಫ್ ಪರೀಕ್ಷೆಗೆ ಅನುಮತಿ ನೀಡಿದೆ. ಈ ವಿಚಾರವನ್ನು ಸ್ವತಃ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಏನಿದು ಪಾಲಿಗ್ರಾಫ್ ಪರೀಕ್ಷೆ?
ಸುಳ್ಳು ಪತ್ತೆ ಪರೀಕ್ಷೆ ಎಂದೂ ಇದನ್ನು ಕರೆಯಲಾಗುತ್ತದೆ. ಕೆಲವೊಂದು ಸಾಧನಗಳನ್ನು ವ್ಯಕ್ತಿಗೆ ಜೋಡಿಸಿ ಬಳಿಕ ಘಟನೆ ಸಂಬಂಧಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆತ ಉತ್ತರಿಸಿದಾಗ ಗ್ರಾಫ್ನಲ್ಲಿ ಬರುವ ವ್ಯತ್ಯಾಸಗಳ ಸಹಾಯದಿಂದ ಪೊಲೀಸರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾವುದೇ ಔಷಧ ಬಳಸದೆ ಸಾಧನಗಳ ಮೂಲಕವೇ ಪರೀಕ್ಷೆ ನಡೆಸಲಾಗುತ್ತದೆ.