ಚೆನ್ನೈ, ನ 22 (DaijiworldNews/DB): ಕೊಳಕಾದ ದಿಂಬು ಮತ್ತು ಹೊದಿಕೆಯಿಂದ ಬರುವ ದುರ್ವಾಸನೆ ತಡೆಯಲಾರದೆ ಪ್ರಯಾಣಿಕರು ರೈಲಿನ ತುರ್ತು ಸರಪಳಿ ಎಳೆದು 20 ನಿಮಿಷಗಳ ಕಾಲ ರೈಲು ನಿಲುಗಡೆಗೊಂಡ ಘಟನೆ ಚೆನ್ನೈ ಸೆಂಟ್ರಲ್- ಏಕ್ತಾ ನಗರ (ಕೆವಾಡಿಯಾ) ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ನಲ್ಲಿ ನಡೆದಿದೆ.
ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ರಾತ್ರಿ 10.40ಕ್ಕೆ ಏಕ್ತಾ ನಗರಕ್ಕ ಹೊರಟಿದ್ದ ಸಾಪ್ತಾಹಿಕ ರೈಲಿನ ಎಸಿ ಕೋಚ್ನಲ್ಲಿ ಪ್ರಯಾಣಿಕರಿಗೆ ಕೊಳಕಾದ ದಿಂಬು ಮತ್ತು ಹೊದಿಕೆಗಳನ್ನು ನೀಡಲಾಗಿತ್ತು. 2ನೇ ಎಸಿ ಮತ್ತು 3ನೇ ಎಸಿ ಕೋಚ್ಗಳಲ್ಲಿ ಆರು ಬೋಗಿಗಳ ಪ್ರಯಾಣಿಕರು ಈ ಕುರಿತು ಆರ್ಪಿಎಫ್ ಸಿಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಎಸಿ ಕೋಚ್ಗಳು ತುಂಬಾ ತಂಪಾಗಿರುವುದರಿಂದ ಬೆಡ್ಶೀಟ್ಗಳನ್ನು ಹೊದಿಯಲು ಸಾಧ್ಯವಾಗುತ್ತಿಲ್ಲ. ಹೊದಿಕೆ ಮತ್ತು ದಿಂಬುಗಳು ತೀರಾ ನೈರ್ಮಲ್ಯದಿಂದ ಕೂಡಿದೆ ಎಂದು ಆರೋಪಿಸಿದರು.
ಈ ವೇಳೆ ಪ್ರಯಾಣಿಕರೊಬ್ಬರು ಕೂಡಲೇ ರೈಲಿನ ತುರ್ತು ಸರಪಳಿ ಎಳೆದಿದ್ದಾರೆ. ಪರಿಣಾಮ ರೈಲು ನಿಲ್ದಾಣವೊಂದರಲ್ಲಿ ನಿಂತಿದ್ದು, ಸುಮಾರು 20 ನಿಮಿಷಗಳ ಪ್ರಯಾಣಿಕರ ವಾಗ್ವಾದದಿಂದಾಗಿ ಹೊರಡಲು ಸಾಧ್ಯವಾಗಿರಲಿಲ್ಲ. ಪ್ರಯಾಣ ಆರಂಭಿಸುವುದಕ್ಕೆ ಮುನ್ನ ದಿಂಬು, ಹೊದಿಕೆ ಬದಲಿಸುವಂತೆ ಪ್ರಯಾಣಿಕರು ಆಗ್ರಹಿಸಿದರು. ಬಳಿಕ ತಡರಾತ್ರಿ ಕಳೆದ ನಂತರ ಬೆಡ್ಶೀಟ್ ಮತ್ತು ದಿಂಬು ಬದಲಾಯಿಸುವ ಕೆಲಸ ನಡೆಯಿತು ಎಂದು ತಿಳಿದು ಬಂದಿದೆ.