ನ 22 (DaijiworldNews/HR): ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಅಪ್ಪಿಕೊಂಡ ಪ್ರೇಮಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರೂ ಗಂಭೀರ ಸ್ಥಿತಿಯಲ್ಲಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಪಿಹೆಚ್ಡಿ ವಿದ್ಯಾರ್ಥಿಯೊಬ್ಬ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಯುವತಿಯನ್ನು ಸುಟ್ಟುಹಾಕುವ ಉದ್ದೇಶದಿಂದ ಬೆಂಕಿ ಹಚ್ಚಿಕೊಂಡು ಆಕೆಯನ್ನು ತಬ್ಬಿಕೊಂಡಿದ್ದು,ಇಬ್ಬರಿಗೂ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಇಬ್ಬರೂ ಪ್ರಾಣಿಶಾಸ್ತ್ರದಲ್ಲಿ ಪಿಹೆಚ್ಡಿ ವಿದ್ಯಾರ್ಥಿಗಳಾಗಿದ್ದು, ಡಾ ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ.
ಹನುಮಾನ್ ತೆಕಡಿಯಲ್ಲಿರುವ ಸರ್ಕಾರಿ ಫೊರೆನ್ಸಿಕ್ ಕಾಲೇಜಿನ ಬಯೋಫಿಸಿಕ್ಸ್ ವಿಭಾಗದ ಕ್ಯಾಬಿನ್ ನಲ್ಲಿ ಯುವತಿ ತನ್ನ ಪ್ರಾಜೆಕ್ಟ್ ಮಾಡುತ್ತಿದ್ದಾಗ ಆರೋಪಿ ಒಳಗೆ ನುಗ್ಗಿ ತನ್ನ ಮದುವೆಯ ಪ್ರಸ್ತಾಪವನ್ನು ಏಕೆ ತಿರಸ್ಕರಿಸಿದೆ ಎಂದು ಪ್ರಶ್ನಿಸುತ್ತಾ ತನ್ನ ಮೇಲೆ ಹಾಗೂ ಆಕೆಯ ಮೇಲೆ ಪೆಟ್ರೋಲ್ ಸುರಿದು ಲೈಟರ್ ಬಳಸಿ ಬೆಂಕಿ ಹಚ್ಚಿ ಯುವತಿಯನ್ನು ತಬ್ಬಿಕೊಂಡಿದ್ದಾನೆ.
ಯುವತಿಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.