ತೀರ್ಥಹಳ್ಳಿ, ನ 22 (DaijiworldNews/HR): ಎಲ್ಲೇ ಇದ್ದರೂ ಬಂದು ಬಿಡು. ಒಳ್ಳೆಯ ದಾರಿಯಲ್ಲಿ ಜೀವನ ನಡೆಸು ಎಂದು ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಮತೀನ್ ಅವರ ತಂದೆ ಮಂಜೂರ್ ಅಹ್ಮದ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತೀನ್ ಬೆಂಗಳೂರಿನ ಘಟನೆಯ ಬಳಿಕ ನಮ್ಮ ಸಂಪರ್ಕದಲ್ಲಿಲ್ಲ. ಆತ ಹೀಗೆ ಆಗುತ್ತಾನೆ ಅಂತ ನಮಗೇ ಗೊತ್ತಿರಲಿಲ್ಲ. ಅವನು ಚೆನ್ನಾಗಿ ಇರಲಿ ಎಂದು ಓದಿಸಿದ್ದೆವು. ಬೆಂಗಳೂರಿನಲ್ಲಿ ಬಿಇ ಓದುತ್ತಿದ್ದ. ಬಳಿಕ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಈಗ ತಂತ್ರಜ್ಞಾನ ಚೆನ್ನಾಗಿದೆ. ಮೊಬೈಲ್ನಲ್ಲಿ ಯಾರು ಏನು ಮಾಡುತ್ತಿರುತ್ತಾರೆ ಎಂದು ಗೊತ್ತಾಗುವುದಿಲ್ಲ ಎಂದರು.
ಇನ್ನು ಮಂಗಳೂರು ಘಟನೆ ಕುರಿತು ಸೋಮವಾರ ಬೆಳಗ್ಗೆ ಪೊಲೀಸರು ಬಂದು ಮನೆಯಲ್ಲಿ ತನಿಖೆ ನಡೆಸಿದ್ದಾರೆ. ಅವರಿಗೆ ಏನು ಬೇಕೋ ಅದನ್ನು ಪರಿಶೀಲಿಸಿಕೊಂಡು ಹೋಗಿದ್ದಾರೆ. ನಾನು ಮತೀನ್ಗೆ ಹೇಳುವುದೇನೆಂದರೆ ಎಲ್ಲೇ ಇದ್ದರೂ ಬಂದು ಬಿಡು. ಒಳ್ಳೆಯ ದಾರಿಯಲ್ಲಿ ಜೀವನ ನಡೆಸು ಎಂದಿದ್ದಾರೆ.
ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಶಾರೀಖ್ ಮೂಲತಃ ತೀರ್ಥಹಳ್ಳಿಯವನಾಗಿದ್ದು, ಹಿಂದೆ ಈತ ವಿನಾಯಕ ಚಿತ್ರಮಂದಿರದ ಎದುರು ಇರುವ ರಸ್ತೆಯಲ್ಲಿ ತನ್ನ ತಂದೆಯ ಕೊಹಿನೂರು ಎಂಬ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಈಗ ತೀರ್ಥಹಳ್ಳಿಯಲ್ಲಿರುವ ಆತನ ಮನೆ ಹಾಗೂ ಆತನ ಸಂಬಂ ಧಿಕರ ನಾಲ್ಕು ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಶಾರೀಖ್ನನ್ನು ಗುರುತಿಸಲು ಮಂಗಳೂರಿಗೆ ತೆರಳಿರುವ ಆತನ ಸಹೋದರಿಯರ ಖಾತೆಗಳಿಗೆ ಬೇರೆ ಬೇರೆ ಮೂಲಗಳಿಂದ ಲಕ್ಷಗಟ್ಟಲೆ ಹಣ ಸಂದಾಯವಾಗಿರುವ ಮಹತ್ವದ ಸುಳಿವು ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ.