ಚಿಕ್ಕಮಗಳೂರು, ನ 21 (DaijiworldNews/DB): ತಮ್ಮನ ಮಗ ಹತ್ಯೆಯಾದ ವಿಚಾರ ತಿಳಿದು ಆಘಾತಗೊಂಡ ದೊಡ್ಡಪ್ಪ ಹೃದಯಾಘಾತದಿಂದ ಮೃತಪಟ್ಟ ಘಟನೆ ತರೀಕೆರೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಪ್ರಕಾಶ್ (55) ಹೃದಯಾಘಾತದಿಂದ ಮೃತಪಟ್ಟವರು. ಇವರ ತಮ್ಮನ ಮಗ ಓಂಕಾರ್ (30) ಅವರನ್ನು ಹಣಕಾಸಿನ ವಿಚಾರವಾಗಿ ಐವರು ಸ್ನೇಹಿತರು ಸೇರಿ ಭಾನುವಾರ ಕೊಲೆ ಮಾಡಿದ್ದರು. ಈ ಸುದ್ದಿ ಕೇಳಿದ ಓಂಕಾರ್ ಅವರ ದೊಡ್ಡಪ್ಪ ಪ್ರಕಾಶ್ ಅವರಿಗೆ ತೀವ್ರ ಆಘಾತವಾಗಿದ್ದು, ಸೋಮವಾರ ಇದೇ ಕಾರಣದಿಂದ ಅವರಿಗೆ ಹೃದಯಾಘಾತವಾಗಿದೆ. ಬಳಿಕ ಅವರು ಸಾವನ್ನಪ್ಪಿದ್ದಾರೆ. ಮನೆಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಇದೀಗ ಇನ್ನೊಂದು ಸಾವು ಸಂಭವಿಸಿರುವುದು ಕುಟುಂಬದವರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಓಂಕಾರ್ ಮತ್ತು ಕೊಲೆ ಆರೋಪಿಗಳು ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ವ್ಯವಹಾರದ ವಿಚಾರದಲ್ಲಿ ಮಾತುಕತೆ ನಡೆಸಲೆಂದು ಭಾನುವಾರ ರಾತ್ರಿ ಆತನನ್ನು ಕರೆದೊಯ್ದಿದ್ದರು. ಈ ವೇಳೆ ಅವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಓಂಕಾರ್ನನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ.