ಮಧುರೈ, ನ 21 (DaijiworldNews/DB): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕವಾಗಿದ್ದ ಕೆಂಗಣ್ಣು ಸಮಸ್ಯೆ ತಮಿಳುನಾಡಿನಲ್ಲಿ ಎರಡು ತಿಂಗಳ ಮೊದಲೇ ಕಾಣಿಸಿಕೊಂಡಿದ್ದು, ಸದ್ಯ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
ಮಧುರೈನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಮದ್ರಾಸ್ ಐ ಕಾಯಿಲೆಯಿಂದ ಬಳಲುತ್ತಿದ್ದು, ದಿನೇ ದಿನೇ ಹೆಚ್ಚುತ್ತಿದೆ. ಇಲ್ಲಿ ಕಳೆದ ಸೆಪ್ಟಂಬರ್ನಲ್ಲೇ ಕಾಯಿಲೆ ಆರಂಭವಾಗಿದ್ದು, ಪ್ರಸ್ತುತ ದ್ವಿಗುಣಗೊಂಡಿದೆ. ಮಧುರೈ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಹಲವರು ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯಲ್ಲಿ ಒಂದೇ ವಾರದಲ್ಲಿ 110ಕ್ಕೂ ಹೆಚ್ಚು ಕೆಂಗಣ್ಣು ಪ್ರಕರಣ ದಾಖಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಣ್ಣು ಊದಿಕೊಳ್ಳುವುದು, ಕೆಂಪಾಗುವುದು, ನೀರು ಬರುವುದು ಮದ್ರಾಸ್ ಐ ಲಕ್ಷಣವಾಗಿದ್ದು, ಇಂತಹ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ಆಗಮಿಸಬೇಕು. ಅಲ್ಲದೆ, ಕುಟುಂಬದಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಅವರನ್ನು ನಾಲ್ಕು ದಿನಗಳ ಕಾಲ ಕ್ವಾರಂಟೈನ್ ಮಾಡಬೇಕು ಎಂದು ತಮಿಳುನಾಡು ಸಚಿವ ಸುಬ್ರಹ್ಮಣ್ಯಂ ಸೂಚಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಗಣ್ಣು ಸಮಸ್ಯೆ ಕಳೆದ ಕೆಲವು ದಿನಗಳಿಂದ ಹಲವರನ್ನು ಬಾಧಿಸಿದೆ. ಮಕ್ಕಳಲ್ಲಿಯೂ ಈ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರುವಂತೆ ವೈದ್ಯರು ಸೂಚಿಸಿದ್ದರು.