ನವದೆಹಲಿ, ನ 21 (DaijiworldNews/DB): ಅಧಿಕಾರ ಕಳೆದುಕೊಂಡವರು ಪುನಃ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ. ಅದಕ್ಕೆ ಯಾತ್ರ ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ಸುರೇಂದ್ರನಗರ ಪಟ್ಟಣದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಸಭೆಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ತರಾಟೆಗೆ ತೆಗೆದುಕೊಂಡರು.
ಗುಜರಾತ್ನಲ್ಲಿ ತಯಾರಾದ ಉಪ್ಪು ತಿಂದು ಇದೇ ರಾಜ್ಯದ ಮೇಲೆ ಕೆಲವರು ಟೀಕಾಪ್ರಹಾರ ನಡೆಸುತ್ತಾರೆ. ಅಂದು ಅಧಿಕಾರದಿಂದ ಕೆಳಗಿಳಿದವರು ಈಗ ಮರಳಿ ಅಧಿಕಾರಕ್ಕೆ ಹಪಹಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನರ್ಮದಾ ಬಚಾವೋ ಆಂದೋಲನದ ಮುಖ್ಯಸ್ಥೆ ಮೇಧಾ ಪಾಟ್ಕರ್ ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿರುವುದನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ನರ್ಮದಾ ಅಣೆಕಟ್ಟು ಯೋಜನೆಯನ್ನು ನಾಲ್ಕು ದಶಕಗಳ ಕಾಲ ಸ್ಥಗಿತಗೊಳಿಸಿದವರಿಗೆ ಸರಿಯಾದ ಪಾಠ ಕಲಿಸಲು ಗುಜರಾತ್ ಜನತೆ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.