ಅಜಂಗಢ, ನ 21 (DaijiworldNews/DB): ದೆಹಲಿಯ ಶ್ರದ್ದಾ ವಾಲ್ಕರ್ ಕೊಲೆ ಪ್ರಕರಣ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಅಂತಹುದೇ ಘೋರ ಕೃತ್ಯವೊಂದು ಬೆಳಕಿಗೆ ಬಂದಿದೆ. ಕೆರೆಯಲ್ಲಿ ಮಹಿಳೆಯೊಬ್ಬಳ ಶವ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಮಾಜಿ ಪ್ರೇಮಿಯ ಕೃತ್ಯ ಎಂದು ಶಂಕಿಸಲಾಗಿದೆ.
ಅಜಂಗಢ ಜಿಲ್ಲೆಯ ಅಹ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಪಶ್ಚಿಮ್ ಪಟ್ಟಿ ಗ್ರಾಮದ ಕೆರೆಯಲ್ಲಿ ಕತ್ತರಿಸಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ಮಾಜಿ ಪ್ರಿಯಕರ ಆಕೆಯನ್ನು ಕೊಲೆಗೈದು ಕತ್ತರಿಸಿದ್ದಾನೆ ಎಂದು ಶಂಕಿಸಲಾಗಿದ್ದು, ಆತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿದೇಶಕ್ಕೆ ಹೋಗಿದ್ದಾಗ ಕಳೆದ ಫೆಬ್ರವರಿಯಲ್ಲಿ ಬೇರೊಬ್ಬನೊಂದಿಗೆ ಮಹಿಳೆ ವಿವಾಹವಾಗಿದ್ದಳು. ಆತ ಮತ್ತೆ ಊರಿಗೆ ವಾಪಸ್ಸಾದಾಗ ಆಕೆ ಮದುವೆಯಾದ ವಿಚಾರ ಗೊತ್ತಾಗಿತ್ತು. ಆದರೆ ಈ ವಿವಾಹದಿಂದ ಆಕೆಯ ಮಾಜಿ ಪ್ರಿಯಕರ ಕೋಪಗೊಂಡಿದ್ದು, ಮದುವೆ ಮುರಿದು ತನ್ನೊಡನೆ ಬರುವಂತೆ ಆಕೆಗೆ ಕೇಳಿಕೊಂಡಿದ್ದ. ಆದರೆ ಇದಕ್ಕೆ ಆಕೆ ಒಪ್ಪದೆ ಮದುವೆಯಾಗಿದ್ದಳು. ಹೀಗಾಗಿ ಮಾಜಿ ಪ್ರಿಯಕರ ಆಕೆಯನ್ನು ಕೊಲೆಗೈದು, ದೇಹವನ್ನು ತುಂಡು ತುಂಡು ಮಾಡಿ ಆಕೆಯ ಬಟ್ಟೆಗಳ ಸಹಿತ ಬಾವಿಗೆ ಎಸೆದಿದ್ದಾನೆ. ತಲೆಯನ್ನು ಕೆರೆಗೆ ಎಸೆದಿದ್ದಾನೆ. ಹೀಗೆ ಮಾಡುವುದರಿಂದ ಶವ ಯಾರದ್ದೆಂದು ಗುರುತು ಪತ್ತೆಯಾಗದು ಎಂದು ಆತ ಊಹಿಸಿದ್ದ ಎಂದು ಅಜಂಗಢದ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ಆತನೊಂದಿಗೆ ಸಹಕರಿಸಿದ ಇತರ ಎಂಟು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.