ಸಾಗರ, ನ 21 (DaijiworldNews/HR): ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ಅತ್ತೆಯ ಸಾವಿನ ಸುದ್ದಿ ಕೇಳಿ ಆಘಾತಗೊಂಡ ಅಳಿಯ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ನಡೆದಿದೆ.
ಸಹೋದರತ್ತೆ ಲಕ್ಷಮ್ಮ(58) ಎಂಬುವವರನ್ನು ಅಳಿಯ ಗುಲ್ಫತ್ ಸಿಂಗ್(45) ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಹೊರಡುವ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ಕಳಿಸಿಕೊಟ್ಟಿದ್ದರು. ಈ ಬಸ್ಸು ಆನಂದಪುರ ಸಮೀಪ ಹೋಗುತ್ತಿದ್ದಾಗ ಅತ್ತೆ ಲಕ್ಷ್ಮಮ್ಮನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಇನ್ನು ಬಸ್ಸಿನಲ್ಲಿದ್ದ ನಿರ್ವಾಹಕ ಲಕ್ಷ್ಮಮ್ಮ ಸಂಬಂಧಿಕರಿಗೆ ಕರೆ ಮಾಡಿ ಮೃತಪಟ್ಟ ಸುದ್ದಿ ತಿಳಿಸಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಶಾಕ್ ಆದ ಗುಲ್ಫತ್ ಸಿಂಗ್ ಲಿಂಗನಮಕ್ಕಿಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಅವರಿಗೂ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.