ಅಸ್ಸಾಂ, ನ 21 (DaijiworldNews/DB): ಅನಾರೋಗ್ಯದಿಂದ ಮೃತಪಟ್ಟ ಪ್ರೇಯಸಿಯ ಶವಕ್ಕೆ ತಾಳಿ ಕಟ್ಟುವ ಮೂಲಕ ಯುವಕನೊಬ್ಬ ಮುಂದೆ ಯಾರನ್ನೂ ಮದುವೆಯಾಗುವುದಿಲ್ಲ ಎಂದು ಶವದ ಮುಂದೆ ವಾಗ್ದಾನ ಮಾಡಿದ ಮನಕಲಕುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಮೊಯಿರ್ಗಾಂವ್ ನಿವಾಸಿ ಬಿಟುಪಾನ್ ತಮುಲಿ ಮತ್ತು ಕೊಸುವಾ ಗ್ರಾಮ ನಿವಾಸಿ ಪ್ರಾರ್ಥನಾ ಬೋರಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಕುಟುಂಬದ ಒಪ್ಪಿಗೆ ಪಡೆದು ಮದುವೆಗೂ ನಿರ್ಧರಿಸಿದ್ದರು. ಆದರೆ ಪ್ರಾರ್ಥನಾ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದು, ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಪ್ರಾರ್ಥನಾ ಶುಕ್ರವಾರ ಸಂಜೆ ಸಾವನ್ನಪ್ಪಿದ್ದರು.
ಇನ್ನು ಪ್ರೇಯಸಿನ ಸಾವಿನ ಸುದ್ದಿ ತಿಳಿದ ಬಿಟುಪಾನ್ ದುಃಖ ತಡೆಯಲಾರದೇ ಆಕೆಯ ಮನೆಗೆ ಬಂದಿದ್ದು, ಮೃತದೇಹಕ್ಕೆ ತಾಳಿ ಕಟ್ಟಿದ್ದಾರೆ. ಅಲ್ಲದೆ ಆಕೆಯನ್ನು ಹೊರತುಪಡಿಸಿ ಇನ್ಯಾರನ್ನೂ ಮದುವೆಯಾಗುವುದಿಲ್ಲ ಎಂದು ಶವದೆದೆದು ವಾಗ್ದಾನ ಮಾಡಿದ್ದರೆ ಎಂದು ಮೃತಳ ಸಂಬಂಧಿ ಸುಭೋನ್ ಬೋರಾ ತಿಳಿಸಿರುವುದಾಗಿ ವರದಿಯಾಗಿದೆ.
ಪ್ರೇಯಸಿಯ ಮೃತದೇಹಕ್ಕೆ ಹಾರ ಹಾಕಿದ ಬಿಟುಪಾನ್ ಬಳಿಕ ಆಕೆಯ ದೇಹಕ್ಕೆ ಇನ್ನೊಂದು ಹಾರ ಮುಟ್ಟಿಸಿ ತಾನೆ ಹಾಕಿಕೊಂಡಿದ್ದಾರೆ. ಆನಂತರ ಆಕೆಯ ಹಣೆ ಮತ್ತು ಕೆನ್ನೆ ಮೇಲೆ ಸಿಂಧೂರ ಹಚ್ಚಿ ತಾಳಿಯನ್ನೂ ಕಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.