ಚಿಕ್ಕಮಗಳೂರು, ನ 21 (DaijiworldNews/HR): ಮೂಡಿಗೆರೆ ತಾಲೂಕು ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದ ಶೋಭಾ (45) ಕಾಡಾನೆ ದಾಳಿಯಿಂದ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದು, ತಡವಾಗಿ ಮೃತದೇಹ ವೀಕ್ಷಿಸಲು ಬಂದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಅಟ್ಟಾಡಿಸಿ ಹಲ್ಲೆ ಮಾಡಿ ಬಟ್ಟೆಯನ್ನು ಹರಿದಿರುವ ಘಟನೆ ನಡೆದಿದೆ.
ಭಾನುವಾರ ಬೆಳಗ್ಗೆ ಘಟನೆ ನಡೆದಿದ್ದರೂ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಸಂಜೆ ವೇಳೆ ಗ್ರಾಮಕ್ಕೆ ತೆರಳಿ ಮೃತದೇಹ ವೀಕ್ಷಿಸಲು ಮುಂದಾಗಿದ್ದು, ಈ ವೇಳೆ ಗ್ರಾಮಸ್ಥರು ಆಕ್ರೋಶಗೊಂಡು ಶಾಸಕ ಕುಮಾರಸ್ವಾಮಿ ಅವರಿಗೆ ಘೇರಾವ್ ಹಾಕಿದಲ್ಲದೆ. ಗ್ರಾಮದ ಮುಖ್ಯರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದು ಬಟ್ಟೆ ಹಿಡಿದರು ಜಗ್ಗಾಡಿದ್ದಾರೆ. ಈ ವೇಳೆ ಶಾಸಕರು ಧರಿಸಿದ ಬಟ್ಟೆ ಹರಿದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಂ.ಪಿ.ಕುಮಾರಸ್ವಾಮಿ, ಆನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಮೃತದೇಹವನ್ನು ವೀಕ್ಷಿಸಲು ತೆರಳಿದ ವೇಳೆ ನನ್ನ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದು, ಇದು ವ್ಯವಸ್ಥಿತ ಪಿತೂರಿತಯಾಗಿದೆ. ನಮ್ಮದೇ ಸರ್ಕಾರದ ಪೊಲೀಸ್ ಇಲಾಖೆ ನನಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.