ಮೈಸೂರು, ನ 20 (DaijiworldNews/MS): ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಆರೋಪಿ ನಕಲಿ ಆಧಾರ್ ಹೊಂದಿದ್ದಂತೆಯೇ , ನಕಲಿ ವಿಳಾಸ ನೀಡಿ, ಮನೆ ಕೊಠಡಿ ಬಾಡಿಗೆ ಪಡೆದಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.
ಮೇಟಗಳ್ಳಿಯಲ್ಲಿರುವ ಲೋಕನಾಯಕ ನಗರದ ಮೋಹನ್ ಕುಮಾರ್ ಎಂಬವರ ಮಾಲಿಕತ್ವದ ಮನೆಯಲ್ಲಿ ವಾಸವಿದ್ದ ಆತ ತನ್ನನ್ನು ತಾನು "ಹುಬ್ಬಳ್ಳಿಯ ಮಾರುತಿಯ ಮಗ ಪ್ರೇಮರಾಜ್" ಎಂದು ಪರಿಚಯಿಸಿಕೊಂಡಿದ್ದ. ತಿಂಗಳಿಗೆ 1,800 ರೂ. ಬಾಡಿಗೆ ಪಾವತಿಸುತ್ತಿದ್ದ. ಆರೋಪಿಯ ಪೋಟೋ ಪೊಲೀಸರು ತೋರಿದಾಗ ಮನೆ ಮಾಲೀಕರು ಆತನ ಗುರುತು ಹಿಡಿದ್ದಾರೆ.
ಆತ ವಾಸವಾಗಿದ್ದ ಕೊಠಡಿಯಲ್ಲಿ ತನಿಖಾ ತಂಡ ಪರಿಶೀಲಿಸಿದಾಗ, ಮೊಬೈಲ್ ಫೋನ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಒಂದು ಡೆಬಿಟ್ ಕಾರ್ಡ್, ಬಳಕೆಯಾಗದ ಸಿಮ್ ಮತ್ತು ನೋಟ್ ಬುಕ್, ಸರ್ಕ್ಯೂಟ್ ಡ್ರಾಯಿಂಗ್ಗಳು , ಸ್ಫೋಟಕ ವಸ್ತುಗಳು, ಸರ್ಕ್ಯೂಟ್ ಬೋರ್ಡ್ಗಳು, ಸಲ್ಫ್ಯೂರಿಕ್ ಆ್ಯಸಿಡ್, ಕೆಲವು ರಾಸಾಯನಿಕಗಳು, ಸಣ್ಣ ಬೋಲ್ಟ್ಗಳು, ಬ್ಯಾಟರಿಗಳು, ಮೊಬೈಲ್ ಡಿಸ್ಪ್ಲೇಗಳು, ಮರದ ಪುಡಿ, ಅಲ್ಯೂಮಿನಿಯಂ ಫಾಯಿಲ್, ಮಲ್ಟಿಮೀಟರ್, ವೈರ್ಗಳು, ಮಿಕ್ಸರ್ ಜಾರ್ಗಳು, ಪ್ರೆಶರ್ ಕುಕ್ಕರ್ ಸೀಟಿಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.