ಬೆಂಗಳೂರು, ನ 19 (DaijiworldNews/MS): ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಬೊಮ್ಮಾಯಿ ಕೈಗೊಂಬೆಯಾಗಿದ್ದಾರೆಯೇ ಎಂದು ಪ್ರಶ್ನಿಸಿದೆ.
ʻಹನಿ ಟ್ರ್ಯಾಪ್ ಹನಿಗಳು ಸಿಎಂ ಕಚೇರಿಯಲ್ಲಿ ಬಿದ್ದಿದ್ದರ ಬಗ್ಗೆ ಬೊಮ್ಮಾಯಿ ಮಾತಾಡಬೇಕು. ಬಿಜೆಪಿ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂಬ ಆರೋಪಗಳು ಬಂದಿವೆ. ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶವೇನು? ಇಂತಹ ಟ್ರ್ಯಾಪ್ಗಳಿಂದ ಬೊಮ್ಮಾಯಿಯವರನ್ನು ಬೊಂಬೆ ರೀತಿ ಆಟ ಆಡಿಸಲಾಗುತ್ತಿದೆಯೇ?ʼ ಎಂದು ಕಾಂಗ್ರೆಸ್ ಕಾಲೆಳೆದಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪಿಎ ಹರೀಶ್ ಎಂಬುವವರನ್ನು ಹನಿಟ್ರ್ಯಾಪ್ ಮಾಡಿ ಸರ್ಕಾರದ ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ರಾಜ್ಯದ ಶಕ್ತಿ ಸೌಧ ವಿಧಾನ ಸೌಧದಲ್ಲೇ ಹನಿಟ್ರ್ಯಾಪ್ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ವಿಧಾನಸೌಧದ ಡಿ ದರ್ಜೆ ನೌಕರೆಯಾಗಿರುವ ಮಹಿಳೆಯಿಂದ ಹನಿಟ್ರ್ಯಾಪ್ ನಡೆದಿದೆ. ಸಿಎಂ ಬೊಮ್ಮಾಯಿ ಸಹಿ ಮಾಡಿರುವ ಹಲವು ಮಹತ್ವದ ದಾಖಲೆಗಳನ್ನು ಪಡೆದು ವಿರೋಧ ಪಕ್ಷದ ನಾಯಕರಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು , ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಜನ್ಮಭೂಮಿ ಫೌಂಡೇಶನ್ ಅಧ್ಯಕ್ಷ ನಟರಾಜ್ ಶರ್ಮಾ ಎಂಬವರು ದೂರು ದಾಖಲಿಸಿದ್ದಾರೆ.