ಇಟಾನಗರ, ನ 19 (DaijiworldNews/DB): ಈಶಾನ್ಯ ವಲಯದ ಸೇವೆಗೆ ಸರ್ಕಾರ ಯಾವಾಗಲೂ ಸಿದ್ದವಾಗಿದೆ. ಇಲ್ಲೀಗ ವಿಮಾನ ನಿಲ್ದಾಣ ರೂಪುಗೊಂಡಿರುವುದು ರಾಜಕೀಯ ಟೀಕಾಕಾರರಿಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಅರುಣಾಚಲದ ಮೊದಲ “ಗ್ರೀನ್ಫೀಲ್ಡ್” ವಿಮಾನ ನಿಲ್ದಾಣವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸಂಸ್ಕೃತಿಯಿಂದ ಕೃಷಿ, ವಾಣಿಜ್ಯದಿಂದ ಸಂಪರ್ಕಕ್ಕೆ ಈಶಾನ್ಯ ಅಭಿವೃದ್ದಿ ನಮ್ಮ ಸರ್ಕಾರದ ಆದ್ಯತೆ. ಇಲ್ಲಿ ವಿಮಾನ ನಿಲ್ದಾಣ ಮಾಡುವ ಮೂಲಕ ರಾಜಕೀಯ ಟೀಕಾಕಾರರಿಗೆ ತಕ್ಕ ಉತ್ತರ ದೊರೆತಿದೆ ಎಂದರು.
ಈ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸುವುದರೊಂದಿಗೆ ಈಶಾನ್ಯದಲ್ಲಿ ಹೊಸ ಭರವಸೆ ಸೃಷ್ಟಿಯಾಗಿದೆ. ಅವಕಾಶಗಳು ಉದಯಿಸುತ್ತಿರುವುದಕ್ಕೆ ಇದು ಸಾಕ್ಷಿ. ಅಭಿವೃದ್ದಿಪರ ಭಾರತ ಮತ್ತು ನವ ಭಾರತಕ್ಕೆ ಇದು ಉದಾಹರಣೆ ಎಂದವರು ತಿಳಿಸಿದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದ ಮೂಲಕ ಎಲ್ಲಾ ವರ್ಗದ, ಎಲ್ಲರನ್ನೂ ಅಭಿವೃದ್ದಿಪಡಿಸುವುದು ನಮ್ಮ ಉದ್ದೇಶ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಈಶಾನ್ಯದ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ವಸಾಹತುಶಾಹಿ ಆಳ್ವಿಕೆಯಲ್ಲಿ ನಿರ್ಬಂಧಿಸಲಾಗಿದ್ದ ಈಶಾನ್ಯದ ಜೀವನೋಪಾಯ ಬಿದಿರಿಗೆ ಈಗ ಕಾನೂನು ಬದಲಾಯಿಸಿ ಅದನ್ನು ಬಳಸುವಂತೆ ಮಾಡಲಾಗಿದೆ. ಈಶಾನ್ಯ ರಾಜ್ಯಗಳ ಅಭಿವೃದ್ದಿಗೆಂದೇ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ದಶಕಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಈಶಾನ್ಯ ರಾಜ್ಯಗಳು ಅಟಲ್ ಜೀ ಸರ್ಕಾರದ ಆಡಳಿತ ಶುರುವಾದಂದಿನಿಂದ ಬದಲಾವಣೆಗೆ ತೆರೆದುಕೊಂಡಿತು ಎಂದವರು ಇದೇ ವೇಳೆ ಸ್ಮರಿಸಿದರು.