ಬೆಂಗಳೂರು, ನ 19 (DaijiworldNews/MS): ಮಾನ ಮರ್ಯಾದೆ ಬಿಟ್ಟ ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲು ಹೇಸುವುದಿಲ್ಲ ಎನ್ನುವುದಕ್ಕೆ ವೋಟರ್ ಐಡಿ ಹಗರಣವೇ ಸಾಕ್ಷಿ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡುರಾವ್ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, "ವೋಟರ್ ಐಡಿ ಹಗರಣದಲ್ಲಿ ಬೊಮ್ಮಾಯಿ ಸರ್ಕಾರದ ನೇರ ಪಾತ್ರವಿದೆ.ಸರ್ಕಾರದ ಪಾತ್ರವಿಲ್ಲದೆ ಖಾಸಗಿ ಸಂಸ್ಥೆಯ ಉದ್ಯೋಗಿಗಳು ಬಿಎಲ್ ಓಗಳಾಗಿ ಮತದಾರರ ಮಾಹಿತಿ ಪಡೆಯಲು ಹೇಗೆ ಸಾಧ್ಯ? ಬೂತ್ ಲೆವೆಲ್ ಆಫೀಸರ್ ಕೇವಲ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಸೀಮಿತ. ಖಾಸಗಿಯವರಿಗೆ ಅವಕಾಶವೇ ಇಲ್ಲ.ಆದರೆ ಚಿಲುಮೆ ಸಂಸ್ಥೆಯ ಉದ್ಯೋಗಿಗಳು ಹೇಗೆ ಬಿಎಲ್ ಓ ಆಫಿಸರ್ಗಳಾದರು" ಎಂದು ಪ್ರಶ್ನಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಸುಮಾರು 7 ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಅದರಲ್ಲೂ ಕಾಂಗ್ರೆಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾರರ ಹೆಸರು ಡಿಲೀಟ್ ಆಗಿದೆ. ಜಾಗೃತಿ ಮೂಡಿಸೋ ನೆಪದಲ್ಲಿ ಅವರೆಲ್ಲಾ ಅನ್ಯಪಕ್ಷದ ಮತದಾರರು ಎಂಬ ಮಾಹಿತಿ ಪಡೆದು ಅವರ ಹೆಸರು ಡಿಲೀಟ್ ಮಾಡಲಾಗಿದೆ. ಇದು ಅಕ್ರಮವಲ್ಲವೆ ಬೊಮ್ಮಾಯಿಯವರೇ" ಎಂದು ಕಿಡಿಕಾರಿದ್ದಾರೆ.
" ಅಧಿಕಾರ ಹಿಡಿಯಲು 'ಆಪರೇಷನ್ ಕಮಲ', ಚುನಾವಣೆ ಗೆಲ್ಲಲು #ಆಪರೇಷನ್ ವೋಟರ್ ಐಡಿ ಇದು BJPಯ ಕೀಳುತಂತ್ರ. ಈ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಆಪರೇಷನ್ ಕಮಲದ ಮೂಲಕ.ಈಗ ಆಪರೇಷನ್ Voter ID ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ. ಮಾನ ಮರ್ಯಾದೆ ಬಿಟ್ಟ ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲು ಹೇಸುವುದಿಲ್ಲ ಎನ್ನುವುದಕ್ಕೆ ಈ ಹಗರಣವೇ ಸಾಕ್ಷಿ" ಎಂದು ಹರಿಹಾಯ್ದಿದ್ದಾರೆ.