ಪಾಟ್ನಾ, ನ 19 (DaijiworldNews/DB): ಬಾಕಿ ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದ ವಯೋವೃದ್ದನ ಸ್ಥಿತಿಗೆ ಮರುಗಿದ ನ್ಯಾಯಾಧೀಶರೊಬ್ಬರು ವೃದ್ದನ ಸಾಲ ತೀರಿಸಿದ ಮಾನವೀಯ ಪ್ರಸಂಗ ಬಿಹಾರದಲ್ಲಿ ನಡೆದಿದೆ.
ಬಿಹಾರದ ಜಿಲ್ಲಾ ನ್ಯಾಯಾಧೀಶ ರಾಕೇಶ್ಕುಮಾರ್ ಅವರೇ ವೃದ್ದನ ಸಾಲ ತೀರಿಸಿ ಮಾನವೀಯತೆ ಮೆರೆದವರು. ಬ್ಯಾಂಕ್ ಸಾಲ ಮಾಡಿದ ರಾಜೀಂದ್ರ ಚೌಹಾನ್ ಎಂಬ ವೃದ್ದನಿಗೆ 18 ಸಾವಿರ ರೂ.ಗಳನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ. ಸಾಲ ಪಾವತಿ ವಿಳಂಬ ವಿಚಾರದ ಇತ್ಯರ್ಥಕ್ಕಾಗಿ ಲೋಕ ಅದಾಲತ್ಗೆ ತೆರಳಿದ್ದರು. ಆದರೆ ಅವರ ಬಳಿ ಕೇವಲ 5 ಸಾವಿರ ರೂ.ಗಳಿತ್ತು. ಇನ್ನು ಅವರೊಂದಿಗೆ ಬಂದ ವ್ಯಕ್ತಿ ಬಳಿ 3 ಸಾವಿರ ರೂ. ಇತ್ತು. ಇನ್ನೂ 10 ಸಾವಿರ ರೂ.ಗಳನ್ನು ವೃದ್ದ ಹೊಂದಿಸಬೇಕಿತ್ತು.
ವೃದ್ದನ ಸ್ಥಿತಿ ಕಂಡು ಮರುಗಿದ ಜಿಲ್ಲಾ ನ್ಯಾಯಾಧೀಶ ರಾಕೇಶ್ಕುಮಾರ್ ಸಿಂಗ್ ತನ್ನ ಜೇಬಿನಿಂದ 10 ಸಾವಿರ ರೂ.ಗಳನ್ನು ತೆಗೆದು ವೃದ್ದನ ಕೈಗಿತ್ತಿದ್ದಾರೆ. ಆ ಮೂಲಕ ಬಾಕಿ ಪಾವತಿಯನ್ನು ಪೂರ್ಣಗೊಳಿಸುವಲ್ಲಿ ನೆರವಾದರು. ಇನ್ನು ನ್ಯಾಯಾಧೀಶರು ನನಗೆ ದೇವರ ರೂಪದಲ್ಲಿ ಬಂದು ಸಹಾಯ ಮಾಡಿದರು ಎಂದು ವೃದ್ದ ಚೌಹಾಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ.