ಬೆಂಗಳೂರು, ನ 19 (DaijiworldNews/DB): ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ತಂಡ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರೊಂದಿಗೆ ರಾಮಲಿಂಗಾ ರೆಡ್ಡಿ, ಸೌಮ್ಯ ರೆಡ್ಡಿ, ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಮುಖಂಡರು ನಿಯೋಗದಲ್ಲಿದ್ದರು. ಮತದಾರರ ಡೇಟಾ ಸೋರಿಕೆ ಮಾಡಲಾಗಿದೆ. ಲಕ್ಷಾಂತರ ಮತದಾರರ ಹೆಸರನ್ನು ಮತ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿ ಚಿಲುಮೆ ಸಂಸ್ಥೆ ಮತ್ತು ಬಿಬಿಎಂಪಿ ವಿರುದ್ದ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮತದಾರರ ಖಾಸಗಿ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತಂದೇ ಕದಿಯಲಾಗಿದೆ. ಈ ಸಂಬಂಧ ತಪ್ಪಿತಸ್ತರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಾಯಕರು ಆಗ್ರಹಿಸಿದರು.
ಸರ್ಕಾರವು ಮಾಹಿತಿ ಕಳ್ಳತನ ಕುರಿತು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಸಿಎಂ ಬೊಮ್ಮಾಯಿ ಉಡಾಫೆ ಉತ್ತರ ನೀಡಿ ಪ್ರಕರಣದಿಂದ ಜಾರಿಕೊಳ್ಳಲು ಯತ್ನಿಸುತ್ತಿದ್ದಾರೆ. ಚಿಲುಮೆ ಸಂಸ್ಥೆಗೆ ಈ ಪ್ರಕರಣದಲ್ಲಿ ಸಂಬಂಧವಿರುವುದು ನಿಶ್ಚಿತ ಎಂದು ಇದೇ ವೇಳೆ ಕಾಂಗ್ರೆಸ್ ಟ್ವೀಟ್ ಮಾಡಿದೆ.