ನವಸಾರಿ, ನ 18 (DaijiworldNews/DB): ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯಿಂದ ದೇಶ ಒಡೆಯಬಹುದೇ ಹೊರತು ಒಗ್ಗೂಡಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ದಕ್ಷಿಣ ಗುಜರಾತ್ನ ನವಸಾರಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ರಾಕೇಶ್ ದೇಸಾಯಿ ಪರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸುತ್ತಿದೆಯೋ, ಭಾರತ್ ತೋಡೋ ಯಾತ್ರೆ ನಡೆಸುತ್ತಿದೆಯೋ ಎಂಬುದೇ ಅರ್ಥವಾಗುತ್ತಿಲ್ಲ. ಪಕ್ಷದ ನಾಯಕರು ದೇಶ ಒಗ್ಗೂಡಿಸಲು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಂಸತ್ತಿನ ಮೇಲೆ ನಡೆದ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅಪ್ಝಲ್ ಗುರು ಪರ ಘೋಷಣೆ ಕೂಗಿದವರನ್ನು ರಾಹುಲ್ ಗಾಂಧಿ ಬೆಂಬಲಿಸಿದ್ದರು. ಜೆಎನ್ಯೂವಿಗೆ ಹೋಗಿ ಬಂದರು. ಅವರು ಅಲ್ಲಿದ್ದಾಗಲೂ ಭಾರತದ ವಿರುದ್ದ ಕೆಲವರು ಘೋಷಣೆ ಕೂಗಿದ್ದರು. ಇನ್ನು ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ದೇಶ ಒಗ್ಗೂಡಿಸಲು ಸಾಧ್ಯವಿಲ್ಲ, ಒಡೆಯಬಹುಷ್ಟೇ ಎಂದು ಕಿಡಿ ಕಾರಿದರು.
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ 350 ಸ್ಥಾನಗಳಿಗೆ ಸ್ಪರ್ಧಿಸಿದ್ದ ಎಎಪಿಯು 349 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದೆ. ಮುಂದೆ ಹಿಮಾಚಲಪ್ರದೇಶ ಚುನಾವಣೆಯಲ್ಲಿಯೂ ಅವರ ಪರಿಸ್ಥಿತಿ ಇದೇ ರೀತಿ ಆಗಲಿದೆ ಎಂದರು.
ಅಭಿವೃದ್ದಿಗಾಗಿ ಮಿಷನ್ ಮೋಡ್ನಲ್ಲಿ ಬಿಜೆಪಿ ಕೆಲಸ ಮಾಡಿದ್ದರೆ, ಇತರರು ಕಮಿಷನ್ ಮೂಡ್ನಲ್ಲಿ ಕೆಲಸ ಮಾಡಿವೆ ಎಂದು ಅವರು ಆಪಾದಿಸಿದರು.