ದೆಹಲಿ, ನ 18 (DaijiworldNews/MS): ಭಯೋತ್ಪಾದನೆಯೂ ಮಾನವೀಯತೆಯ ಮೇಲೆ ಪರಿಣಾಮ ಬೀರುತ್ತಿದ್ದು, ಇದರಿಂದಾಗಿ ನಾವು ಸಾವಿರಾರು ಜೀವಗಳನ್ನು ಕಳೆದುಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ದೆಹಲಿಯ ತಾಜ್ ಪ್ಯಾಲೇಸ್ ಹೊಟೇಲ್ನಲ್ಲಿ ನಡೆಯುತ್ತಿರುವ ‘'ನೋ ಮನಿ ಫಾರ್ ಟೆರರ್" ಎಂಬ ವಿಷಯಾಧಾರಿತ ಮೂರನೇ ಜಾಗತಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸುತ್ತಿರುವ ದೇಶವೊಂದರ ಜತೆ ಸಂವಹನಕ್ಕೆ ನಿಮಗೆಲ್ಲ ಅವಕಾಶ ದೊರೆತಿದೆ ಎಂದು ಸಮ್ಮೇಳನದಲ್ಲಿ ಭಾಗವಹಿಸಿದ ಪ್ರತಿನಿಧಿಗಳನ್ನು ಉದ್ದೇಶಿಸಿ ಪ್ರಧಾನಿ ಹೇಳಿದ್ದಾರೆ.
"ದಶಕಗಳಲ್ಲಿ, ಭಯೋತ್ಪಾದನೆಯು ವಿಭಿನ್ನ ಹೆಸರುಗಳು ಮತ್ತು ರೂಪಗಳಲ್ಲಿ ಭಾರತವನ್ನು ನೋಯಿಸಲು ಪ್ರಯತ್ನಿಸುತ್ತಿದೆ. ಇದರಿಂದ ಸಾವಿರಾರು ಅಮೂಲ್ಯ ಜೀವಗಳನ್ನು ಕಳೆದುಕೊಂಡರೂ ಭಾರತವು ಭಯೋತ್ಪಾದನೆಯ ವಿರುದ್ಧ ಧೈರ್ಯದಿಂದ ಹೋರಾಡಿದೆ ಎಂದು ಅವರು ಹೇಳಿದ್ದಾರೆ.
ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು ಎಲ್ಲ ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಒಬ್ಬ ಭಯೋತ್ಪಾದಕನನ್ನು ಶಸ್ತ್ರಾಸ್ತ್ರಗಳ ಮೂಲಕ ನಾಶಗೊಳಿಸಬಹುದು. ಎಲ್ಲಾ ಭಯೋತ್ಪಾದಕ ದಾಳಿಗಳು ಸಮಾನ ಆಕ್ರೋಶಕ್ಕೆ ಅರ್ಹವಾಗಿವೆ. ಎಲ್ಲಿ ದಾಳಿ ನಡೆದಿದೆ, ಯಾರ ಮೇಲೆ ನಡೆದಿದೆ ಎಂಬುದು ಪ್ರಶ್ನೆಯಲ್ಲ. ಭಯೋತ್ಪಾದಕ ದಾಳಿಗಳ ವಿರುದ್ಧ ಇಡೀ ವಿಶ್ವ ಒಂದಾಗಿ ಹೋರಾಡಬೇಕಿದೆ. ಆದ್ದರಿಂದ, ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಗುಡುಗಿದ್ದಾರೆ.