ನವದೆಹಲಿ, ನ 18 (DaijiworldNews/DB): ಭಯೋತ್ಪಾದನೆಗೆ ಯಾವುದೇ ಧರ್ಮ, ರಾಷ್ಟ್ರೀಯತೆಯೊಂದಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಭಯೋತ್ಪಾದನೆಗಿಂತ ಹೆಚ್ಚು ಅಪಾಯಕಾರಿ ಎಂದರೆ ಭಯೋತ್ಪಾದಕರಿಗೆ ಹಣಕಾಸಿನ ನೆರವು ಒದಗಿಸುವುದು. ಯುವಕರನ್ನು ತಪ್ಪು ದಾರಿಗೆಳೆದು ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಹಣ ಹೊಂದಿಸಲು ಉಗ್ರರು ಹಲವು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಡಾರ್ಕ್ ನೆಟ್ ಬಳಕೆ ಮಾಡಿ ತಮ್ಮ ಗುರುತು ಮರೆಮಾಚಿಕೊಂಡು ಮೂಲಭೂತವಾದಿ ವಿಚಾರಗಳನ್ನು ಹರಡಲು ಯತ್ನಿಸುತ್ತಿದ್ದಾರೆ. ಇಂತಹ ನೀಚ ಕೃತ್ಯದಲ್ಲಿ ತೊಡಗುವವರನ್ನು ಯಾವುದೇ ಧರ್ಮ, ರಾಷ್ಟ್ರೀಯತೆಯೊಂದಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಆದರೆ ಕೆಲವು ದೇಶಗಳು ಉಗ್ರರಿಗೆ ರಕ್ಷಣೆ ನೀಡಿ, ನೆಲೆ ಕಲ್ಪಿಸುವುದನ್ನು ನೋಡಿದ್ದೇವೆ. ಅವರನ್ನು ರಕ್ಷಿಸುವುದು ಭಯೋತ್ಪಾದನೆಗೆ ನೀಡಿದ ಪ್ರೋತ್ಸಾಹ ಎಂದೇ ಆಗುತ್ತದೆ. ಅಂತಹವರ ಉದ್ದೇಶ ಸಾಫಲ್ಯ ಕಾಣದಂತೆ ನೋಡಿಕೊಳ್ಳುವ ಜವಾಬ್ದಾರಿ ವಿಶ್ವದ ಇತರ ರಾಷ್ಟ್ರಗಳ ಮೇಲಿದೆ ಎಂದರು.
ಜಗತ್ತಿನ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ದೊಡ್ಡ ಸವಾಲಾಗಿದೆ. ಅವರಿಗೆ ಹಣಕಾಸಿನ ನೆರವೊದಗಿಸುವುದು ಅಪಾಯಕಾರಿ. ಹಣಕಾಸಿನ ನೆರವಿನಿಂದಾಗಿ ಇಂತಹ ಪಾತಕಿಗಳು ಪೋಷಿಸಲ್ಪಡುತ್ತಿವೆ. ಅವರಿಗೆ ಹಣಕಾಸು ಒದಗಿಸುವುದರಿಂದ ವಿಶ್ವದ ವಿವಿಧ ರಾಷ್ಟ್ರಗಳ ಆರ್ಥಿಕತೆ ಕುಸಿಯುತ್ತದೆ ಎಂದವರು ಆತಂಕ ವ್ಯಕ್ತಪಡಿಸಿದರು.
ಭದ್ರತಾ ವ್ಯವಸ್ಥೆ ಬಲಪಡಿಸುವುದರೊಂದಿಗೆ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಮೂಲಕ ಭಯೋತ್ಪಾದನೆಯನ್ನು ಎದುರಿಸಲು ನಾವು ಹಲವು ಸುಧಾರಣೆಗಳನ್ನು ಮಾಡಿದ್ದೇವೆ ಎಂದವರು ಇದೇ ವೇಳೆ ತಿಳಿಸಿದರು.