ನವದೆಹಲಿ,ನ 18 (DaijiworldNews/MS): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟವು ನವೆಂಬರ್ 19ರಂದು ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಪರಿಣಾಮವಾಗಿ ಎಟಿಎಂ ಸೇರಿದಂತೆ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಬುಧವಾರದಂದು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಮತ್ತು ಭಾರತೀಯ ಬ್ಯಾಂಕ್ಗಳ ಅಸೋಸಿಯೇಷನ್ (IBA) ನಡುವಿನ ಚರ್ಚೆಗಳು ಯಾವುದೇ ಸಕಾರಾತ್ಮಕ ಅಥವಾ ತೃಪ್ತಿಕರ ಫಲಿತಾಂಶಗಳನ್ನು ನೀಡಲಿಲ್ಲ. ಹೀಗಾಗಿ ಮುಷ್ಕರಕ್ಕೆ ಕರೆ ನೀಡಿದೆ
"ಐಬಿಎ ಮತ್ತು ಬ್ಯಾಂಕ್ ಆಡಳಿತದೊಂದಿಗೆ ಚರ್ಚೆಯ ಬಳಿಕ, ಯಾವುದೇ ಸೌಹಾರ್ದಯುತ ಪರಿಹಾರ ಸಿಗಲಿಲ್ಲ. ನವೆಂಬರ್ 19 ರಂದು ಯೋಜಿಸಿದಂತೆ ನಾವು ಮುಷ್ಕರವನ್ನು ಮುಂದುವರಿಸುತ್ತೇವೆ . ಈ ವಿಚಾರವನ್ನು ಮುಖ್ಯ ಕಾರ್ಮಿಕ ಆಯುಕ್ತರಿಗೆ ತಿಳಿಸಿದ್ದೇವೆ"ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಂ ತಿಳಿಸಿದ್ದಾರೆ.
ಸೇವಾ ಭದ್ರತೆ ನೀಡುವಂತೆ ಸರ್ಕಾರವನ್ನು ಆಗ್ರಹಿಸಿ ಮತ್ತು ಒಕ್ಕೂಟದಲ್ಲಿ ಸಕ್ರಿಯರಾಗಿರುವ ಬ್ಯಾಂಕ್ ಉದ್ಯೋಗಿಗಳ ಮೇಲೆ ಹೆಚ್ಚುತ್ತಿರುವ ದಾಳಿಗಳನ್ನು ಖಂಡಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.