ಬೆಂಗಳೂರು:, ನ 17 (DaijiworldNews/DB): ಭ್ರಷ್ಟಾಚಾರ, ಅಕ್ರಮದಲ್ಲೇ ಮುಳುಗಿರುವ ಕಾಂಗ್ರೆಸ್ನವರಿಗೆ ಮಾಡಲು ಕೆಲಸವಿಲ್ಲದ ಕಾರಣ ನನ್ನ ಮೇಲೆ ನಿರಾಧಾರ ಆರೋಪ ಹೊರಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಹೊಂಬಾಳೆ ಎಂಬ ಸಂಸ್ಥೆಯೊಂದು ಬಿಬಿಎಂಪಿ ಮತದಾರರ ಪಟ್ಟಿಯನ್ನು ಅಕ್ರಮವಾಗಿ ಪರಿಷ್ಕರಿಸಿದ್ದು, ಇದರ ಹಿಂದೆ ಬೊಮ್ಮಾಯಿ ಹಾಗೂ ಅಶ್ವತ್ಥನಾರಾಯಣ ಕೈವಾಡವಿರುವುದಾಗಿ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಂಬಾಳೆ ಎಂಬ ಯಾವುದೋ ಸಂಸ್ಥೆಯನ್ನು ಹಿಡಿದುಕೊಂಡು ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಅವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು.
ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಹೊಂಬಾಳೆ ಸಂಸ್ಥೆಯು ನನ್ನ ಸಹೋದರನದ್ದು ಇದೆ. ಆದರೆ ಅದಕ್ಕೂ ಇವರು ಹೇಳುತ್ತಿರುವ ಹೊಂಬಾಳೆ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ. ಆ ಹೆಸರಿಟ್ಟುಕೊಳ್ಳಬೇಡ ಎನ್ನಲು ನಾನು ಯಾರು? ತತ್ವ ಸಿದ್ದಾಂತಗಳಿಗಾಗಿ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆಯೇ ಹೊರತು ಕಾಂಗ್ರೆಸ್ನಂತೆ ಕುಟುಂಬ ರಾಜಕೀಯ ಮಾಡುವುದಕ್ಕಲ್ಲ ಎಂದು ಪ್ರತಿಕ್ರಿಯಿಸಿದರು.
ಅವರು ಆರೋಪಿಸುತ್ತಿರುವ ಹೊಂಬಾಳೆ ಸಂಸ್ಥೆಯ ವ್ಯಕ್ತಿ ನನ್ನೊಂದಿಗೆ ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ನನ್ನ ಹೆಸರನ್ನು ಎಳೆದು ತರುವುದು ಸಲ್ಲ. ಸಾರ್ವಜನಿಕ ಜೀವನದಲ್ಲಿ ಹಲವರು ಫೋಟೋ ತೆಗೆಸಿಕೊಳ್ಳುತ್ತಾರೆ. ಕಳ್ಳಕಾಕರು, ಕೊಲೆಗಾರರೊಂದಿಗೆಲ್ಲಾ ಅವರು ಫೋಟೋ ತೆಗೆಸಿಕೊಂಡಿಲ್ಲವೇ ಎಂದು ಪ್ರಶ್ನಿಸಿದರು.
ಡಿಕೆಶಿಯಾಗಲೀ, ಸಿದ್ದರಾಮಯ್ಯನವರಾಗಲೀ, ಸುರ್ಜೇವಾಲ ಅವರಾಗಲೀ ಕಾಂಗ್ರೆಸ್ನ ಯಾವೊಬ್ಬ ನಾಯಕರ ಬಳಿಯೂ ಮಾತನಾಡುವುದಕ್ಕೆ ಗಂಭೀರ ವಿಚಾರಗಳಿಲ್ಲ. ಹಾಗಾಗಿ ವೃಥಾ ಆರೋಪಕ್ಕಿಳಿದಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗದ ಕೆಲಸವಾಗಿದ್ದು, ಇದರಲ್ಲಿ ತಪ್ಪು ಕಂಡು ಬಂದಲ್ಲಿ ಅವರು ಆಯೋಗಕ್ಕೆ ದೂರು ನೀಡಲಿ. ಅದು ಬಿಟ್ಟು ನಿರಾಧಾರವಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ಇದೇ ವೇಳೆ ಅವರು ಆಕ್ರೋಶ ವ್ಯಕ್ತಪಡಿಸಿದರು.