ನವದೆಹಲಿ, ನ 17 (DaijiworldNews/DB): ರಾಜೀವ್ ಹಂತಕರನ್ನು ಜೈಲಿನಿಂದ ಬಿಡುಗಡೆ ಮಾಡಿದಂತೆ ನನ್ನನ್ನೂ ಬಿಡುಗಡೆಗೊಳಿಸಿ ಎಂದು ಪತ್ನಿಯ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸ್ವಯಂಘೋಷಿತ ದೇವಮಾನವ ಸ್ವಾಮಿ ಶ್ರದ್ದಾನಂದ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ರಾಜೀವ್ ಗಾಂಧಿ ಹಂತಕರಿಗೆ ಹಲವು ಬಾರಿ ಪೆರೋಲ್ ನೀಡಲಾಗಿದ್ದರೂ, ಕಳೆದ 29 ವರ್ಷಗಳಿಂದ ಜೈಲಿನಲ್ಲೇ ಇರುವ ನನಗೆ ಒಮ್ಮೆಯೂ ಪೆರೋಲ್ ನೀಡಿಲ್ಲ. ಅವರನ್ನೀಗ ಕಾರಾಗೃಹವಾಸದಿಂದ ಮುಕ್ತಿಗೊಳಿಸಲಾಗಿದೆ. ಅವರಂತೆ ನನ್ನನ್ನೂ ಬಿಡುಗಡೆ ಮಾಡಿ ಎಂಬುದಾಗಿ ಶ್ರದ್ದಾನಂದ ತನ್ನ ವಕೀಲ ವರುಣ್ ಠಾಕೂರ್ ಮುಖಾಂತರ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಸ್ಥಳೀಯ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಆದರೆ ಸುಪ್ರೀಂಕೋರ್ಟ್ ಅದನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಾಡು ಮಾಡಿತ್ತು. ಅಧಿಕಾರಿಗಳು ಈ ತೀರ್ಪನ್ನು ಅರ್ಥ ಮಾಡಿಕೊಂಡದ್ದು ತಪ್ಪಾಗಿರುವ ಕಾರಣ ನನಗೆ ಒಂದು ದಿನವೂ ಪೆರೋಲ್ ಸಿಕ್ಕಿರಲಿಲ್ಲ. ನನಗೀಗ 80 ವರ್ಷ ವಯಸ್ಸಾಗಿದೆ. 2014ರಲ್ಲಿ ಕ್ಷಮಾದಾನ ಹಾಗೂ ಪೆರೋಲ್ಗಾಗಿ ಅರ್ಜಿ ಸಲ್ಲಿಸಿದ್ದೆ. ಕರ್ನಾಟಕ ಸರ್ಕಾರಕ್ಕೆ ಈ ಸಂಬಂಧ ನ್ಯಾಯಾಲಯ ನೊಟೀಸ್ ನೀಡಿದ ಬಳಿಕ ಅರ್ಜಿ ವಿಚಾರಣೆಯೇ ನಡೆದಿಲ್ಲ. ಹೀಗಾಗಿ ಈಗಿನ ಅರ್ಜಿಯನ್ನು ವಿಚಾರಣೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಶ್ರದ್ದಾನಂದ ತನ್ನ ಪತ್ನಿ ಶಾಖಿರ್ ನಮಾಜಿ ಅವರನ್ನು 1991ರ ಏಪ್ರಿಲ್ 28ರಂದು ಬೆಂಗಳೂರಿನ ತಮ್ಮ ಬಂಗಲೆಯ ಕಾಂಪೌಂಡ್ ಒಳಗೆ ಜೀವಂತವಾಗಿ ಕೂತು ಹಾಕಿದ್ದರು. ಆನಂತರ ಪುತ್ರಿ ನೀಡಿದ ದೂರಿನ ಮೇರೆಗೆ ಅವರನ್ನು ಪೊಲೀಸರು ಬಂಧಿಸಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಪತ್ನಿಯ ಆಸ್ತಿ ಕಬಳಿಸುವ ಉದ್ದೇಶದಿಂದ ಈ ಹತ್ಯೆ ನಡೆದಿತ್ತು ಎನ್ನಲಾಗಿದೆ.