ಮುಂಬೈ, ನ 17 (DaijiworldNews/DB): ರಾಹುಲ್ ಗಾಂಧಿಯವರನ್ನು ತಬ್ಬಿಕೊಂಡ ಆದಿತ್ಯ ಠಾಕ್ರೆ ಅವರನ್ನು ಗೋಮೂತ್ರದಿಂದ ಶುದ್ದೀಕರಿಸಬೇಕು ಎಂದು ಮಹಾ ಸಿಎಂ ಏಕನಾಥ ಶಿಂಧೆ ಬಣದಲ್ಲಿ ಗುರುತಿಸಿಕೊಂಡಿರುವ ದೀಪಕರ್ ಕೇಸರ್ಕರ್ ಹೇಳಿದ್ದಾರೆ.
ಸಾರ್ವಕ್ರರ್ ಬಗ್ಗೆ ಲಘುವಾಗಿ ಮಾತನಾಡಿ ಬ್ರಿಟಿಷರೊಂದಿಗೆ ಸಾವರ್ಕರ್ ಕ್ಷಮಾಪಣೆ ಕೇಳಿದ್ದರು ಎಂಬ ರಾಹುಲ್ ಹೇಳಿಕೆ ಬೆನ್ನಲ್ಲೇ ಮಾತನಾಡಿರುವ ಅವರು, ಭಾರತ್ ಜೋಡೋ ಯಾತ್ರೆಯಲ್ಲಿ ಆದಿತ್ಯ ಠಾಕ್ರೆ ಅವರು ರಾಹುಲ್ ಗಾಂಧಿಯವರನ್ನು ಅಪ್ಪಿಕೊಂಡಿದ್ದಾರೆ. ಆದರೆ ಸಾವರ್ಕರ್ ಅವರನ್ನು ಟೀಕಿಸಿದ ರಾಹುಲ್ರನ್ನು ಅಪ್ಪಿಕೊಂಡಿದ್ದಕ್ಕಾಗಿ ಆದಿತ್ಯ ಠಾಕ್ರೆಗೆ ಗೋಮೂತ್ರ ಸಿಂಪಡಿಸಬೇಕು. ಅಲ್ಲದೆ, ಗೋಮೂತ್ರದಿಂದ ಸ್ನಾನ ಮಾಡಿಸಿ ಅವರನ್ನು ಶುದ್ದೀಕರಣ ಮಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ವೀರ ಸಾವರ್ಕರ್ ಅವರನ್ನು ಅವಮಾನ ಮಾಡುವವರೊಂದಿಗೆ ತಾನು ಹೋಗುತ್ತಿದ್ದೇನೆಂಬ ಅರಿವು ಆದಿತ್ಯ ಠಾಕ್ರೆಯವರಿಗೆ ಇರಲಿಲ್ಲವೇ ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ದಾವ್ನೆ ಪ್ರಶ್ನಿಸಿದ್ದಾರೆ.
ಸಾವರ್ಕರ್ರನ್ನು ನಿಂದಿಸಿರುವ ರಾಹುಲ್ ಗಾಂಧಿಯನ್ನು ಆದಿತ್ಯ ಠಾಕ್ರೆ ಅಪ್ಪಿಕೊಂಡಿರುವುದು ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವದ ಸಿದ್ದಾಂತಕ್ಕಾದ ಸೋಲಾಗಿದೆ. ಅವರ ಆಶೀರ್ವಾದ ಆದಿತ್ಯಗೆ ಎಂದೂ ಸಿಗದು ಎಂದವರು ಹೇಳಿದ್ದಾರೆ.