ಕರ್ನೂಲ್, ನ 17 (DaijiworldNews/DB): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿಯನ್ನು ಜನ ಅಧಿಕಾರಕ್ಕೆ ತಾರದಿದ್ದಲ್ಲಿ ಅದು ನನ್ನ ಕೊನೆಯ ಚುನಾವಣೆ ಎಂದು ಟಿಡಿಪಿ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಕರ್ನೂಲ್ ಜಿಲ್ಲೆಯ ರೋಡ್ ಶೋನಲ್ಲಿ ಮಾತನಾಡಿದ ಅವರು, ತೆಲುಗು ದೇಶಂ ಪಕ್ಷ ಅಧಿಕಾರಕ್ಕೆ ಬರಬೇಕೆಂಬುದು ನನ್ನ ಇಚ್ಚೆ. ಟಿಡಿಪಿ ಅಧಿಕಾರಕ್ಕೆ ಬಂದ ಬಳಿಕವೇ ವಿಧಾನಸಭೆಗೆ ಕಾಲುಡುವುದಾಗಿ ಹೇಳಿದರು.
ನಾನು ಮತ್ತೆ ವಿಧಾನಸಭೆಗೆ ಹೋಗಬೇಕೆಂದಿದ್ದರೆ ಮತ್ತು ಆಂಧ್ರದ ಜನರಿಗೆ ನ್ಯಾಯ ಸಿಗಬೇಕೆಂದಾದರೆ ಟಿಡಿಪಿಯನ್ನು ಜನರು ಗೆಲ್ಲಿಸಬೇಕು. ಟಿಡಿಪಿ ಅಧಿಕಾರಕ್ಕೆ ಬಾರದಿದ್ದಲ್ಲಿ ಮುಂದೆಂದೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರು.
2021ರಲ್ಲಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷವು ತನ್ನ ಪತ್ನಿಗೆ ಅವಮಾನ ಮಾಡಿದೆ. ಇಂತಹ ಅವಮಾನ ಸಹಿಸುವುದು ಸಾಧ್ಯವಿಲ್ಲ. ಹೀಗಾಗಿ ಅಧಿಕಾರವನ್ನು ಮರಳಿ ಪಡೆದ ಬಳಿಕವೇ ವಿಧಾನಸಭೆಗೆ ಕಾಲಿಡುವುದಾಗಿ ನಿರ್ಧರಿಸಿದ್ದೇನೆ. ಮಕ್ಕಳು, ರಾಜ್ಯದ ಭವಿಷ್ಯಕ್ಕಾಗಿ ನಮ್ಮ ಹೋರಾಟ. ನನ್ನ ನಿಲುವು ಸರಿ ಎಂದಾದಲ್ಲಿ ಸಹಕರಿಸಿ ಎಂದು ಇದೇ ವೇಳೆ ಮನವಿ ಮಾಡಿದರು.
ನನ್ನ ವಯಸ್ಸಿನ ಅಣಕ ಮಾಡುವವರಿಗೆ ನಾನು, ಪ್ರಧಾನಿ ಮೋದಿ ಒಂದೇ ವಯಸ್ಸಿನವರೆಂದು ತಿಳಿದಿರಬೇಕು. ಇನ್ನು ಬೈಡನ್ 79ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದಾರೆ ಎಂದರು.