ಬೆಂಗಳೂರು, ನ 17 (DaijiworldNews/MS): ವೋಟರ್ ಐಡಿ ಹಗರಣ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ಚುನಾವಣಾ ಆಯೋಗವು ಸ್ವೀಪ್ ಕಾರ್ಯಕ್ರಮದಡಿ ಬಿಬಿಎಂಪಿಗೆ ಸಮೀಕ್ಷೆಯನ್ನು ವಹಿಸಿದೆ. ಈ ಸಮೀಕ್ಷಾ ಕೆಲಸವನ್ನು ಎನ್.ಜಿ.ಓ ದುರ್ಬಳಕೆ ಮಾಡಿದ ಬಗ್ಗೆ ಆರೋಪವಿದೆ.ಹೀಗಾಗಿ, ಇಡೀ ವಿಚಾರದ ಬಗ್ಗೆ ತನಿಖೆ ನಡೆಯಲಿದ್ದು, ಸತ್ಯಾಂಶ ಹೊರಬರಲಿದೆ. ಆದರೆ, ಕಾಂಗ್ರೆಸ್ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಕಾಂಗ್ರೆಸ್ ನಾಯಕರು ಈ ಸಂಬಂಧ ದೂರು ನೀಡಿದರೆ ಅದರ ವಿರುದ್ಧ ತನಿಖೆ ನಡೆಸಲಾಗವುದು. ತನಿಖೆಯಲ್ಲಿ ಆರೋಪದ ಸತ್ಯಾಸತ್ಯತೆ ಹೊರಬರುತ್ತದೆ2018ರಲ್ಲೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಜವಾಬ್ದಾರಿ ನೀಡಿತ್ತು. ಅದೇ ರೀತಿ ಈ ಎನ್ಜಿಓ ಕೂಡ ಮತದಾರರ ಮಾಹಿತಿ ಕಲೆಹಾಕುವ ಕೆಲಸ ಮಾಡಿದೆ. ಈಗ ಕಾಂಗ್ರೆಸ್ ಈ ವಿಚಾರದಲ್ಲಿ ಆರೋಪ ಮಾಡಿದೆ, ಇದು ಆಧಾರರಹಿತವಾಗಿದೆ" ಎಂದು ಹೇಳಿದ್ದಾರೆ.