ಬೆಂಗಳೂರು, ನ 17 (DaijiworldNews/HR): ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುವ ಎರಡು ದಿನಗಳ ಮೊದಲು ಅಂದರೆ ನವೆಂಬರ್ 9 ರಂದು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಭದ್ರತಾ ವೈಫಲ್ಯವಾಗಿದ್ದು, ಅಸ್ಸಾಂನ ವ್ಯಕ್ತಿಯೊಬ್ಬ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದು ಇದರ ಬೆನ್ನಲ್ಲಿಯೇ ಗುಪ್ತಚರ ಹಾಗೂ ಭದ್ರತಾ ವೈಫಲ್ಯ ಆಗಿತ್ತೇ ಎನ್ನುವ ಅನುಮಾನ ಉಂಟಾಗಿ ಆತನನ್ನು ಬಂಧಿಸಿರುವ ಘಟನೆ ನಡೆದಿದೆ.
ತನ್ನ ಪ್ರೇಯಸಿಯ ಗಂಡನಿಗೆ ಹೆದರಿ ಅಸ್ಸಾಂ ಮೂಲದ ಮುಕುಂದ್ ಖೌಂಡ್ ಹೆಚ್ಎಎಲ್ ಕಾಂಪೌಡ್ಗೆ ನುಗ್ಗಿದ್ದ ಎಂದು ಹೇಳಲಾಗಿದೆ.
ಮುಕುಂದ್ ಎಂಬಾತ ಪೂರ್ವಿ ಎಂಬಾಕೆಯನ್ನು ಪ್ರೀತಿಸುತ್ತಿದ್ದು, ಈಕೆ ತನ್ನ ಗಂಡನ ಜೊತೆ ಯಮಲೂರಿನಲ್ಲಿ ವಾಸವಾಗಿದ್ದಳು. ಪೂರ್ವಿಯನ್ನು ಭೇಟಿಯಾಗಲು ಅಸ್ಸಾಂನಿಂದ ಮುಕುಂದ್ ಖೌಂಡ್ ಬಂದಿದ್ದ. ಈ ವೇಳೆ ಪೂರ್ವಿ ಗಂಡನಿಗೆ ಮುಕುಂದ್ ಸಿಕ್ಕಿಬಿದ್ದಿದ್ದು, ಆತನಿಂದ ತಪ್ಪಿಸಿಕೊಂಡು ಓಡಿ ಬರುವ ವೇಳೆ ಯಮಲೂರಿನ ಬಳಿ ಆಕಸ್ಮಿಕವಾಗಿ ಹೆಚ್ಎಎಲ್ ಕೌಂಪಂಡ್ ಪ್ರವೇಶಿಸಿದ್ದು, ಸಿಸಿಟಿವಿಯಲ್ಲಿ ಆತ ಕಾಂಪೌಂಡ್ ಜಂಪ್ ಮಾಡುವುದನ್ನು ಗಮನಿಸಿದ ಪೊಲೀಸರು ಕೂಡಲೇ ತೆರಳಿ ಆತನನ್ನು ಬಂಧಿಸಿದ್ದಾರೆ.
ಇನ್ನು ಮುಕುಂದ್ ಖೌಂಡ್ ವಿರುದ್ಧ ಭಾರತೀಯ ಅಧಿಕೃತ ರಹಸ್ಯ ಕಾಯಿದೆ 1923 ಮತ್ತು IPC ಸೆಕ್ಷನ್ 418, 379 ಮತ್ತು 511 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.