ಹೈದರಾಬಾದ್, ನ 17 (DaijiworldNews/DB): ಪತ್ನಿ ಕೋಪಗೊಂಡು ತವರುಮನೆಗೆ ಹೋದದ್ದಕ್ಕೆ ಮದ್ಯಪಾನ ಮಾಡಿದ ಯುವಕನೊಬ್ಬ ಪೊಲೀಸ್ ಠಾಣೆಗೆ ಹುಸಿಬಾಂಬ್ ಕರೆ ಮಾಡಿ ಜೈಲುಪಾಲಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ಸಂತೋಷ್ ನಗರದ ನಿವಾಸಿ ಅಕ್ಬರ್ ಖಾನ್ ಜೈಲು ಪಾಲಾದ ಯುವಕ.ರಿಕ್ಷಾ ಚಾಲಕನಾಗಿರುವ ಈತ ಕುಡಿದ ಅಮಲಿನಲ್ಲಿ ಮಂಗಳವಾರ ಮಧ್ಯರಾತ್ರಿ ಸಯೀದಾಬಾದ್ ಪೊಲೀಸ್ ಠಾಣೆಗೆ ಕರೆ ಮಾಡಿ ಸಂತೋಷ್ ನಗರದ ದೇವಸ್ಥಾನ ಮತ್ತು ಮಸೀದಿ ನಡುವೆ ಬಾಂಬ್ ಇಡಲಾಗಿದೆ ಎಂದಿದ್ದಾನೆ. ಕೂಡಲೇ ಪೊಲೀಸರು ಶೋಧ ನಡೆಸಿದ್ದು, ಬಾಂಬ್ ನಿಷ್ಕ್ರಿಯ ದಳವೂ ಆಗಮಿಸಿದೆ. ಸಥ ಎರಡು ಗಂಟೆ ಹುಡುಕಾಟ ನಡೆಸಿದರೂ ಬಾಂಬ್ ಪತ್ತೆಯಾಗದ ಕಾರಣ ಕರೆ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆತನಿಗೆ 18 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಇನ್ನು ಈತನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಮನೆಯಲ್ಲಿ ಪತಿ ಪತ್ನಿ ನಡುವೆ ಗಲಾಟೆಯಾಗಿದ್ದು, ಈ ಕಾರಣಕ್ಕೆ ಪತ್ನಿ ಮನೆ ಬಿಟ್ಟು ತವರುಮನೆಗೆ ಹೋಗಿದ್ದಳು. ಇದರಿಂದ ನೊಂದ ಯುವಕ ಕುಡಿತದ ಅಮಲಿನಲ್ಲಿ ಪೊಲೀಸ್ ಠಾಣೆಗೆ ಹುಸಿಬಾಂಬ್ ಕರೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.