ಬೆಂಗಳೂರು, ನ 17 (DaijiworldNews/MS): ರಾಜ್ಯ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೋವುಗಳ ರಕ್ಷಣೆಗಾಗಿ ಜಾರಿಗೆ ತಂದಿರುವ "ಪುಣ್ಯಕೋಟಿ ದತ್ತು ಯೋಜನೆ"ಗೆ ಸರ್ಕಾರಿ ನೌಕರರ ವೇತನದಿಂದ ದೇಣಿಗೆ ಕಡಿತಗೊಳಿಸಲು ಸರ್ಕಾರ ಬುಧವಾರ ಮಂಜೂರಾತಿ ನೀಡಿದೆ.
ರಾಜ್ಯ ಸರಕಾರಿ ನೌಕರರ ಸಂಘ ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಸರಕಾರ ನೌಕರರ ವೇತನ ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಆದೇಶದ ಪ್ರಕಾರ, ನವೆಂಬರ್ ತಿಂಗಳ ವೇತನದಿಂದ ‘ಡಿ’ ವೃಂದದ ನೌಕರರನ್ನು ಬಿಟ್ಟು, ಎ ದರ್ಜೆಯ ಅಧಿಕಾರಿಗಳು ರೂ 11000, ಬಿ ಗ್ರೇಡ್ ರೂ 4000 ಮತ್ತು ಸಿ ಗ್ರೇಡ್ ರೂ 400 ವರೆಗೆ ಪಾವತಿಸಬೇಕಾಗುತ್ತದೆ.
ವಂತಿಗೆ ಕೊಡಲು ಇಚ್ಛೆ ಇಲ್ಲದವರು, ಅಸಮ್ಮತಿ ಪತ್ರವನ್ನು ಇದೇ 25ರ ಒಳಗೆ ಸಂಬಂಧಿಸಿದ ವೇತನ ಬಟವಾಡೆ ಅಧಿಕಾರಿಗಳಿಗೆ ಲಿಖಿತವಾಗಿ ನೀಡಬೇಕು ಎಂದೂ ಆದೇಶದಲ್ಲಿ ವಿವರಿಸಲಾಗಿದೆ. ಎಲ್ಲಾ ಮೊತ್ತವನ್ನು ಪಶುಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ ಮಾತನಾಡಿ, ‘ಸರ್ಕಾರವು ನೌಕರರ ವೇತನ ಕಡಿತದಿಂದ 80 ರಿಂದ 100 ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆ ಇದೆ. ಸರ್ಕಾರ ನಿರ್ಧಾರ ಪ್ರಕಟಿಸುವ ಮುನ್ನ ಎಲ್ಲ ದರ್ಜೆಯ ಅಧಿಕಾರಿಗಳು ಮತ್ತು ನೌಕರರ ಅನುಮತಿ ಕೋರಿದೆ. ಏಳನೇ ವೇತನ ಆಯೋಗ ರಚನೆ ಮಾಡಿ ಆಯವ್ಯಯದಲ್ಲಿ ಸೇರಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಅದಕ್ಕಾಗಿಯೇ ನಾವು ರಾಜ್ಯ ಸರ್ಕಾರದ ಉದಾತ್ತ ಕಾರ್ಯದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದೇವೆ ಂದು ಹೇಳಿದ್ದಾರೆ.
ಪ್ರಸಕ್ತ ಸಾಲಿನ (2022–23) ಬಜೆಟ್ನಲ್ಲಿ ‘ಪುಣ್ಯಕೋಟಿ’ ದತ್ತು ಯೋಜನೆಯನ್ನು ಮುಖ್ಯಮಂತ್ರಿ ಘೋಷಿಸಿದ್ದರು. ಅಲ್ಲದೆ, ಈ ಯೋಜನೆಯ ಧ್ಯೇಯೋದ್ದೇಶಕ್ಕೆ ಪೂರಕವಾಗಿ ಗೋವುಗಳನ್ನು ಪೋಷಿಸುವ ಕಾರ್ಯಕ್ಕೆ ಸರ್ಕಾರದ ಹಾಗೂ ಸರ್ಕಾರದ ಇತರ ಅವಿಭಾಜ್ಯ ಅಂಗಗಳಾದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ವಾಯತ್ತ ಸಂಸ್ಥೆಗಳ ನೌಕರರು ನೆರವು ನೀಡಬೇಕು ಎಂದು ಮನವಿ ಮಾಡಿದ್ದರು.