ವಾಶಿಮ್, ನ 16 (DaijiworldNews/DB): ಬಿರ್ಸಾ ಮುಂಡಾ ಅವರು ಹುತಾತ್ಮರಾದರೇ ಹೊರತು ಸಾವರ್ಕರ್ರಂತೆ ಬ್ರಿಟಿಷರಿಗೆ ತಲೆಭಾಗಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮಹಾರಾಷ್ಟ್ರದ ವಿದರ್ಭ ಪ್ರದೇಶದ ವಾಶಿಮ್ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದ ಪ್ರಯುಕ್ತ ಬುಧವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾವರ್ಕರ್ ಹಿಂದುತ್ವ ಸಿದ್ದಾಂತ ಹೊಂದಿದ್ದರೂ ಬ್ರಿಟಿಷರಿಗಾಗಿ ಕೆಲಸ ಮಾಡುತ್ತಿದ್ದರು ಎಂದು ಆಪಾದಿಸಿದರು.
ದಲಿತರು, ಬುಡಕಟ್ಟು ಜನಾಂಗ ಮತ್ತು ಬಡವರಿಗೆ ಸಿಗಬೇಕಾದ ಹಕ್ಕುಗಳು ಸಿಗಬೇಕು. ಆದರೆ ಇದನ್ನು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಸಂವಿಧಾನದ ಮೇಲೆ ಆ ಪಕ್ಷ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಸಂವಿಧಾನ ರಕ್ಷಣೆ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಬುಡಕಟ್ಟು ಜನರಿಗೆ ಶಿಕ್ಷಣ ನೀಡಲು, ಅವರ ಹಕ್ಕುಗಳನ್ನು ರಕ್ಷಿಸಲು ಕಾಂಗ್ರೆಸ್ ಸದಾ ಬದ್ದವಾಗಿದೆ ಎಂದರು.
ಎರಡು-ಮೂರು ವರ್ಷಗಳ ಕಾಲ ಅಂಡಮಾನ್ ನ ಜೈಲಿನಲ್ಲಿದ್ದ ಬಳಿಕ ಕ್ಷಮಾದಾನ ಅರ್ಜಿಗಳನ್ನು ಬರೆಯಲು ಪ್ರಾರಂಭಿಸಿದರು. ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದ ಅವರು ಬ್ರಿಟಿಷರಿಗಾಗಿ ಕೆಲಸ ಮಾಡುತ್ತಿದ್ದರು. ಆದರೆ ಬಿರ್ಸಾ ಮುಂಡಾ ಬ್ರಿಟಿಷರ ವಿರುದ್ದದ ಹೋರಾಟದಲ್ಲಿ ಒಂದಿಂಚೂ ಹಿಂದೆ ಸರಿಯಲಿಲ್ಲ ಎಂದು ಪ್ರತಿಪಾದಿಸಿದರು.