ರಾಜಸ್ಥಾನ, ನ 16 (DaijiworldNews/DB): ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಅವರು ಪಕ್ಷದ ರಾಜಸ್ಥಾನ ಉಸ್ತುವಾರಿ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.
ಈ ಸಂಬಂಧ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಅಜಯ್ ಮಾಕೆನ್, ರಾಜಸ್ಥಾನದ ಉಸ್ತುವಾರಿ ಜವಾಬ್ದಾರಿಯಲ್ಲಿ ಮುಂದುವರಿಯುವ ಇಚ್ಚೆ ಇಲ್ಲ.
ಹೀಗಾಗಿ ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ ಭಾರತ್ ಜೋಡೋ ಯಾತ್ರ ಮುಂದಿನ ತಿಂಗಳಾರಂಭದಲ್ಲಿ ರಾಜಸ್ಥಾನಕ್ಕೆ ಆಗಮಿಸಲಿದೆ. ಅಲ್ಲದೆ ಡಿಸೆಂಬರ್ 4 ರಂದು ಉಪ ಚುನಾವಣೆಯೂ ಇದೆ. ಹೀಗಾಗಿ ರಾಜ್ಯಕ್ಕೆ ಶೀಘ್ರ ಹೊಸ ಉಸ್ತುವಾರಿಯನ್ನು ನೇಮಕ ಮಾಡುವುದು ಉತ್ತಮ ಎಂದೂ ಹೇಳಿದ್ದಾರೆ.
ನಾಲ್ಕು ದಶಕಗಳಿಂದ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ನಾನು ರಾಹುಲ್ ಜೀ ಅವರ ಕಟ್ಟಾ ಅನುಯಾಯಿ, ಅದನ್ನು ಮುಂದುವರಿಸುತ್ತೇನೆ. ಅವರ ಮೇಲೆ ನನಗೆ ನಂಬಿಕೆ ಇದೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಲು ಕೊನೆ ಕ್ಷಣದಲ್ಲಿ ಹಿಂದೇಟು ಹಾಕಿದ್ದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರ ನಿರ್ಧಾರದ ಹಿನ್ನೆಲೆಯಲ್ಲಿ ಅಜಯ್ ಮಾಕೆನ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.